Moodubidire: ಮೂಡುಬಿದಿರೆ ತಾಲೂಕು ಕೆಡಿಪಿ ಸಭೆ

Moodubidire: ಮೂಡುಬಿದಿರೆ ತಾಲೂಕು ಕೆಡಿಪಿ ಸಭೆ

ಮೂಡುಬಿದಿರೆಗೆ ಸುಸಜ್ಜಿತವಾದ ಪೊಲೀಸ್ ಠಾಣೆ, ಮೈನ್ ಶಾಲೆಗಳಿಗೆ ಕಟ್ಟಡಗಳ ಬೇಡಿಕೆ 


ಮೂಡುಬಿದಿರೆ: ಇಲ್ಲಿನ ಆರಕ್ಷಕರ ಠಾಣೆಯು ಸುಸಜ್ಜಿತವಾಗಿಲ್ಲ, ಪೊಲೀಸರಿಗೆ ಬೇಕಾಗುವ ಮೂಲಭೂತವಾದ ವ್ಯವಸ್ಥೆ ಸರಿಯಾಗಿಲ್ಲ, 60 ಸಿಬ್ಬಂದಿಗಳ ಅವಶ್ಯಕತೆ ಇರುವ ಠಾಣೆಯಲ್ಲಿ ಕೇವಲ 40 ಮಂದಿ ಸಿಬ್ಬಂದಿಗಳಷ್ಟೇ ಇದ್ದಾರೆ ಇದರಿಂದಾಗಿ ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ತೊಂದರೆಯಾಗುತ್ತಿದೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಶಾಸಕರ ಗಮನಕ್ಕೆ ತಂದರು.

ಶಾಸಕ ಉಮನಾಥ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಡೆದ ಮೊದಲ ತಾಲೂಕು ಕೆಡಿಪಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ವೈದ್ಯರಿಲ್ಲದಿರುವುದರಿಂದ ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ವಿಳಂಬವಾಗುತ್ತಿದೆ. ಪೊಲೀಸ್ ಸಿಬ್ಬಂದಿ ನೇಮಕದ ಸಮಸ್ಯೆ ಹಾಗೂ ನೊಂದ ಸಂಬಂಧಿಕರು ಆಕ್ರೋಶಕ್ಕೊಳಗಾಗುತ್ತಾರೆ. ಹೀಗಾಗಿ ವೈದ್ಯರು ಕೇಂದ್ರ ಸ್ಥಳದಲ್ಲಿಯೇ ಇರುವಂತಹ ವ್ಯವಸ್ಥೆಯಾಗಬೇಕು ಎಂದು ವೃತ್ತ ನಿರೀಕ್ಷಕರು ಆಗ್ರಹಿಸಿದರು.

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರ ನೇಮಕವಾಗಿದೆ. ಹೊಸ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದ್ದು ಎರಡು ವಾರದೊಳಗೆ ಕಾರ್ಯರೂಪಕ್ಕೆ ತರಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹೇಳಿದರು.

ಮೂಡುಬಿದಿರೆ ಮೈನ್ ಶಾಲೆ, ಬೆಳುವಾಯಿ ಮೈನ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು ಹೊಸ ಕಟ್ಟಡಕ್ಕೆ ಬೇಡಿಕೆಯಿಡುತ್ತಿದ್ದಾರೆ. ಶಿಕ್ಷಣ ಇಲಾಖೆ ಹೊಸ ಕಟ್ಟಡಕ್ಕೆ ಅನುಮತಿ ನೀಡುತ್ತಿಲ್ಲ. ದುರಸ್ಥಿಗೆ ಕಟ್ಟಡಗಳಿಲ್ಲ ಎಂದು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ಜಗದೀಪ್ ಶೇಟ್ ಅಸಹಾಯಕತೆ ತೋಡಿಕೊಡರು. ಹೆಚ್ಚು ವಿದ್ಯಾರ್ಥಿಗಳಿರುವಲ್ಲಿ ಹೊಸ ಕಟ್ಟಡ ನಿರ್ಮಿಸುವುದು ಅನಿವಾರ್ಯ. ಲಭ್ಯವಿರುವ ಅನುದಾನದಲ್ಲಿ ಹೊಸ ಕಟ್ಟಡ ನಿರ್ಮಿಸಲು ಇಲಾಖೆಯಿಂದ ಅನುಮತಿ ದೊರಕಿಸಿಕೊಡುವಂತೆ ಶಾಸಕ ಉಮನಾಥ ಕೋಟ್ಯಾನ್ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಸೂಚಿಸಿದರು.

ಕೃಷಿ ಇಲಾಖೆಯಲ್ಲಿ ಸಿಬಂದಿ ಕೊರತೆಯಿದೆ. ಈಗ ತಾನೋಬ್ಬನೇ ಕರ್ತವ್ಯದಲ್ಲಿದ್ದು, ಕೆಲವೇ ತಿಂಗಳುಗಳಲ್ಲಿ ನಿವೃತ್ತಿಯಾಗಲಿದ್ದೇನೆ. ಬಳಿಕ ಇಲಾಖೆಯಲ್ಲಿ ಸಿಬಂದಿಯಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕೃಷಿ ಅಧಿಕಾರಿ ವಿ.ಎಸ್ ಕುಲಕರ್ಣಿ ಸಮಸ್ಯೆ ತೋಡಿಕೊಂಡರು. ಈ ಕುರಿತು ವಿಧಾನಸಭೆಯಲ್ಲಿ ಪ್ರಶ್ನಿಸುವುದಾಗಿ ಉಮಾನಾಥ ಕೋಟ್ಯಾನ್ ಭರವಸೆ ನೀಡಿದರು.

ಪ್ರವಾಸಿ ಮಂದಿರ ನಿರ್ಮಾಣ ವಿಳಂಬ ಯಾಕೆ..?: 

ಮೂಡುಬಿದಿರೆಯಲ್ಲಿ ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿದ ಸುಸಜ್ಜಿತ ಪ್ರವಾಸಿ ಮಂದಿರದ ಕಾಮಗಾರಿ ವಿಳಂಬದ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಲಾಯ್ಡ್ ಸಂದೀಪ್ ಡಿಸಿಲ್ವ ಅವರನ್ನು ಪ್ರಶ್ನಿಸಿದರು. 

ಮೊದಲ ಹಂತದಲ್ಲಿ 2 ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಅನುದಾನದ ಕೊರತೆಯಿಂದ ಕಾಮಗಾರಿ ವಿಳಂಬವಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೂ ಇದೇ ಪರಿಸ್ಥಿತಿಯಿದೆ. ಆದರೆ ಪ್ರವಾಸಿ ಮಂದಿರದ ಕಾಮಗಾರಿಯನ್ನು 15 ದಿನಗಳೊಳಗಾಗಿ ಆರಂಭಿಸುವುದಾಗಿ ಅವರು ತಿಳಿಸಿದರು. ಅಂಬೇಡ್ಕರ್ ಭವನದ ಜಾಗಕ್ಕೆ ಕನಿಷ್ಠ ತಡೆಗೋಡೆಯನ್ನಾದರೂ ನಿರ್ಮಿಸುವಂತೆ ಉಮನಾಥ ಕೋಟ್ಯಾನ್ ಸೂಚಿಸಿದರು.

ಮೂಡುಬಿದಿರೆ ಪರಿಸರದಲ್ಲಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವ ದೂರುಗಳು ಬರುತ್ತಿವೆ. ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳು ಇಲ್ಲಿರುವುದರಿಂದ ಡ್ರಗ್ಸ್ ನಿಯಂತ್ರಣ ಹೇರಲು ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವಂತೆ  ಕೋಟ್ಯಾನ್ ಅವರು ಅಬಕಾರಿ, ಪೋಲಿಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ದ.ಕ. ಕೆ.ಎಂ.ಎಫ್.ನ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು.

ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ ಬಿ, ಕುಡಿಯುವ ನೀರು ಮತ್ತು ನೈರ್ಮಲ್ಯಕರಣದ ಇಂಜಿನಿಯರ್ ಎಂ. ಶಿವಣ್ಣ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರವಾಗಿ ಹರೀಶ ಕೆ., ಸಮಾಜ ಕಲ್ಯಾಣ ಇಲಾಖೆಯ ಪರವಾಗಿ ಪ್ರೀತಿ, ಪಶುವೈದ್ಯ ಇಲಾಖೆಯ ಡಾ. ಗುರುರಾಜ್, ಅಬಕಾರಿ ನಿರೀಕ್ಷಕ ಸುಬ್ರಹ್ಮಣ್ಯ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಪ್ರೋಬೆಷನರಿ ಐಎಎಸ್ ಅಧಿಕಾರಿ ಮುಕುಲ್ ಜೈನ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಲೋಕೇಶ ಸಿ. ಸ್ವಾಗತಿಸಿದರು. ಪಿಡಿಒ ಸಾಯೀಶ ಚೌಟ ಕಾರ್ಯಕ್ರಮ ನಿರೂಪಿಸಿ. ವಂದಿಸಿದರು.

ಕೆಡಿಪಿ ಸಭೆ ಹಾಜರಾಗದ ಅಧಿಕಾರಿಗಳು: 

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ಬಿ.ಸಿ.ಎಂ. ಇಲಾಖೆ, ಆಹಾರ ಇಲಾಖೆ, ಅಂಬೇಡ್ಕರ್ ನಿಗಮ ಮತ್ತು ಯುವ ಸಬಲೀಕರಣದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸದೆ ಗೈರಾಗಿರುವ ಕಾರಣ ಅವರಿಗೆ ನೋಟೀಸ್ ಜಾರಿಗೊಳಿಸುವಂತೆ ಶಾಸಕ ಕೋಟ್ಯಾನ್ ಸೂಚಿಸಿದ್ದಾರೆ.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article