Chikkamagaluru: ನೀರು ಮತ್ತು ಪೋಷಕಾಂಶಗಳ ನಿರ್ವಹಣೆಯಿಂದ ಮಾತ್ರ ಅಡಿಕೆಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯಲು ಸಾಧ್ಯ: ನಟರಾಜು
ಚಿಕ್ಕಮಗಳೂರು: ನೀರು ಮತ್ತು ಪೋಷಕಾಂಶಗಳ ನಿರ್ವಹಣೆಯಿಂದ ಮಾತ್ರ ಅಡಿಕೆಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯಲು ಸಾಧ್ಯ ಎಂದು ಕೃಷಿ ತಜ್ಞ ನಟರಾಜ್ ಹೇಳಿದ್ದಾರೆ.
ಅವರು ಜಿಲ್ಲೆಯ ಸಖರಾಯಪಟ್ಟಣ ಹೋಬಳಿ ಪಿಳ್ಳೆನಹಳ್ಳಿ ಗ್ರಾಮದಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಮೂಡಿಗೆರೆಯ ವಿದ್ಯಾರ್ಥಿಗಳ ಗ್ರಾಮೀಣ ತೋಟಗಾರಿಕಾ ಕಾರ್ಯಾನುಭವ ಶಿಬಿರದಡಿಯಲ್ಲಿ ಆಯೋಜಿಸಲಾಗಿದ್ದ ಅಡಿಕೆ ಬೆಳೆಯ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತಮ ನೀರು ಹಾಗೂ ಪೋಷಕಾಂಶಗಳ ನಿರ್ವಹಣೆಯ ಮೂಲಕ ಪರಿಹಾರಗಳನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದ ಅವರು ಅಡಿಕೆ ತೋಟದಲ್ಲಿ ಅಲಸಂದೆ, ಹುರುಳಿ, ಸೆಣಬು ಡಯಾಂಚಾದಂತಹ ಹಸಿರು ಎಲೆ ಗೊಬ್ಬರಗಳನ್ನು ಬೆಳೆದರೆ ಕಳೆಗಳ ನಿರ್ವಹಣೆ ಮಾಡುವುದರ ಜೊತೆಗೆ ತೋಟಕ್ಕೆ ಬೇಕಾಗುವ ನೀರಿನ ಪ್ರಮಾಣವನ್ನು ತಗ್ಗಿಸಬಹುದು ಹಾಗೂ ಕೀಟಗಳ ಬಾಧೆಯನ್ನು ತಡೆಗಟ್ಟಬಹುದೆಂದರು. ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯನ್ನಾಗಿ ಬಾಳೆಯನ್ನು ಬೆಳೆದರೆ ಕಳೆ ನಿರ್ವಹಣೆಯ ಜೊತೆಗೆ ಹೆಚ್ಚುವರಿ ಆದಾಯವನ್ನು ಗಳಿಸಬಹುದು ಹಾಗೂ ಮಾಗಿ ಉಳುಮೆ ಮಾಡುವುದರಿಂದ ಕೀಟ ಹಾಗೂ ರೋಗಗಳ ಬಾಧೆಯನ್ನು ತಡೆಗಟ್ಟಬಹುದು ಎಂದರು.
ತೋಟದಲ್ಲಿ ಬಸಿ ಕಾಲುವೆಗಳನ್ನು ಮಾಡಬೇಕು ಇಲ್ಲವಾದಲ್ಲಿ ಹಿಡಿ ಮುಂಡಿಗೆಯ ಕಾಟ ತಪ್ಪಿದ್ದಲ್ಲಎನ್ನುವುದರ ಜೊತೆಗೆ ಹೆಚ್ಚು ರಂಜಕವನ್ನು ಬಳಸುವುದರಿಂದಲೂ, ಅತಿ ಹೆಚ್ಚು ಕೆರೆಗೋಡು ಹಾಕಿಸುವುದರಿಂದಲೂ ಹಿಡಿಮುಂಡಿಗೆ ಉಂಟಾಗಬಹುದು ಎಂದರು.
ಅಡಿಕೆ ಸಿಪ್ಪೆಯನ್ನು ನೇರವಾಗಿ ಉಪಯೋಗಿಸುವುದರ ಬದಲು ಗೊಬ್ಬರವನ್ನಾಗಿ ಮಾಡಿ ತೋಟಕ್ಕೆ ಹಾಕುವುದರಿಂದ ಭೂಮಿಗೆ ಹೆಚ್ಚು ಪೋಷಕಾಂಶಗಳನ್ನು ಸೇರಿಸಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕಿರಣ್, ಪಿಳ್ಳೇನಹಳ್ಳಿಯ ಗ್ರಾಮಸ್ಥರು, ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆಯ ವಿದ್ಯಾರ್ಥಿಗಳು ಇದ್ದರು.
