Moodubidire: ಸಲೀಂ ಗರ್ಡಾಡಿ ಅವರಿಗೆ 'ರಾಜ್ಯ ವೈದ್ಯ ರತ್ನ' ಪ್ರಶಸ್ತಿ
Monday, March 25, 2024
ಮೂಡುಬಿದಿರೆ: ಕರ್ನಾಟಕ ಹೆಲ್ತ್ ಕೇರ್ ಆಶ್ರಯದಲ್ಲಿ ಭಾನುವಾರ ಬೆಂಗಳೂರಿನಲ್ಲಿ ನಡೆದ 'ರಾಜ್ಯ ವೈದ್ಯ ರತ್ನ' ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮೂಡುಬಿದಿರೆ ಪಡ್ಡಂದಡ್ಕ ಸಮೀಪದ ಗರ್ಡಾಡಿಯ ಸಲೀಂ ಗರ್ಡಾಡಿ ಅವರಿಗೆ 'ರಾಜ್ಯ ವೈದ್ಯ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಸಂತೋಷ್ ಹೆಗ್ಡೆ ಅವರು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಮೂಡುಬಿದಿರೆಯ ಖ್ಯಾತ ವೈದ್ಯ ಎಂ.ಕೆ.ಗರ್ಡಾಡಿ ಅವರ ಪುತ್ರರಾಗಿರುವ ಸಲೀಂ ಅವರು ತಂದೆಯ ಹಾದಿಯಲ್ಲೇ ಪಾರಂಪರಿಕ ನಾಟಿ ವೈದ್ಯಕೀಯ ವೃತ್ತಿಯನ್ನು ಕರಗತ ಮಾಡಿಕೊಂಡು ಹೋಗಿ ಸಣ್ಣ ಪ್ರಾಯದಲ್ಲೇ ಅಪಾರ ಜನಮನ್ನಣೆ ಗಳಿಸಿದರು.
ತಂದೆ ಎಂ.ಕೆ. ಗರ್ಡಾಡಿ ಅವರೊಂದಿಗೆ ಕೆಲಕಾಲ ಮೂಡುಬಿದಿರೆಯಲ್ಲೇ ಇದ್ದು ವೈದ್ಯಕೀಯ ಸೇವೆಯನ್ನು ಅಭ್ಯಾಸ ಮಾಡಿರುವ ಸಲೀಂ ಪ್ರಸ್ತುತ ಚಿಕ್ಕಮಗಳೂರಿನಲ್ಲಿ ಸೇವೆ ನೀಡುತ್ತಿದ್ದಾರೆ.
ವೈದ್ಯಕೀಯ ಸೇವೆಯ ಜೊತೆಗೆ ಸಾಮಾಜಿಕ ಸೇವೆಯಲ್ಲೂ ಗಮನಸೆಳೆದಿರುವ ಸಲೀಂ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಅವರ ಅಪಾರ ಮಿತ್ರವೃಂದ, ಊರಿನಲ್ಲಿ ಸಂತಸ ತಂದಿದೆ.
