Moodubidire: ಬದುಕಿನ ಮಾರ್ಗದರ್ಶಿಯಾಗಿ ಲೋಕಮಾನ್ಯವಾದ ಭಗವದ್ಗೀತೆ: ಶರಣ್ ಪಂಪ್ ವೆಲ್
ಮೂಡುಬಿದಿರೆಯಲ್ಲಿ ವಿಹಿಂಪ ಪ್ರಖಂಡದಿಂದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ
ಮೂಡುಬಿದಿರೆ: ಲೋಕಾ ಸಮಸ್ತಾ ಸುಖಿನೋ ಭವಂತು ಎನ್ನುವ ಹಿಂದೂಗಳು ಸಹಬಾಳ್ವೆ, ಸಾಮರಸ್ಯ, ಸೌಹಾರ್ದತೆ, ಜಾತ್ಯತೀತೆಯನ್ನು ಬದುಕಿನ ಭಾಗವಾಗಿಸಿಕೊಂಡವರು. ಈ ನೆಲದಲ್ಲಿ ವ್ಯವಹಾರ ಸಹಿತ ಇನ್ನಿತರ ಕಾರಣಗಳಿಂದ ಬಂದವರು ಹಿಂದೂ ಸಮಾಜವದಲ್ಲಿ ಶಾಂತಿ ಸಾಮರಸ್ಯವನ್ನು ಕದಡುವ ಕೆಲಸ ಮಾಡಿದರೆ ಸಹಿಸಲಾಗುವುದಿಲ್ಲ ಎಂದುವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.
ಅವರು ಮೂಡುಬಿದಿರೆ ಪ್ರಖಂಡ ವಿಶ್ವ ಹಿಂದೂಪರಿಷತ್, ಜಬರಂಗದಳ, ಮಾತೃಶಕ್ತಿ, ದುರ್ಗಾ ವಾಹಿನಿ ವತಿಯಿಂದ ಸ್ವರಾಜ್ಯ ಮೈದಾನದ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ಜರಗಿದ 21ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಭಗವದ್ಗೀತೆ ಎನ್ನುವುದು ಬದುಕಿನ ಮಾರ್ಗದರ್ಶಿ ಎನ್ನುವುದನ್ನು ಜಗತ್ತು ಒಪ್ಪಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಕೃಷ್ಣ ಶಾಂತಿಗೆ ಮೊದಲ ಆದ್ಯತೆ ನೀಡಿದ್ದ ಅದನ್ನೂ ತಿರಸ್ಕರಿಸಿದವರಿಗೆ ಯುದ್ಧದ ಮೂಲಕ ತಕ್ಕ ಪಾಠ ಕಲಿಸಿದ ಆದರ್ಶ ಇತಿಹಾಸ ನಮ್ಮದು. ನಮ್ಮೊಂದಿಗಿದ್ದು ಸಮಾಜದ ಸಾಮರಸ್ಯ ಕೆಡಿಸುವವರ ಸವಾಲೆದುರಿಸಲು ಬರೇ ಸರಕಾರಗಳನ್ನು ನಂಬಿ ಕೂರುವುದಲ್ಲ. ನಾವೆಲ್ಲರೂ ಸನ್ನದ್ಧರಾಗಿರಬೇಕು ಎಂದರು.
ಶತಮಾನದ ಸಂಭ್ರಮದಲ್ಲಿರುವ ಆರೆಸ್ಸೆಸ್, ಷಷ್ಠ್ಯಬ್ದ ಸಂಭ್ರಮದಲ್ಲಿರುವ ವಿಶ್ವ ಹಿಂದೂ ಪರಿಷತ್ ದೇಶದಲ್ಲಿ ಹಿಂದೂ ಸಮಾಜದ ಪರಿವರ್ತನೆ, ಅಭಿವೃದ್ಧಿಗೆ ಶ್ರಮಿಸಿದ ಪರಿಣಾಮ ಇಂದು ರಾಮ ಮಂದಿರದ ಕನಸು ನನಸಾಗಿದೆ. ಕಾಶ್ಮೀರ ಭಾರತದ ಭಾಗವಾಗಿದೆ. ಚಂದ್ರನಲ್ಲೂ ನಮ್ಮ ಧ್ವಜ ಹಾರಾಡಿದೆ. ಕಾಶಿ, ಮಥುರಾ ಸಹಿತ ಅನೇಕ ಹಿಂದೂ ದೇವಾಲಯಗಳು ಮತ್ತೆ ನಮ್ಮ ಪಾಲಾಗುವ ಸುದಿನಗಳು ಕಾಣುತ್ತಿವೆ. ಕಳೆದ ಒಂದು ವರ್ಷದಲ್ಲಿ ಒಂದೂವರೆ ಲಕ್ಷ ಗೋವುಗಳ ರಕ್ಷಣೆ, 3 ಸಾವಿರದಷ್ಟು ಹಿಂದೂ ಯುವತಿಯರನ್ನು ಲವ್ ಜಿಹಾದ್ ಕಪಿ ಮುಷ್ಠಿಯಿಂದ ಪಾರು ಮಾಡಿದ ಧನ್ಯತೆ ಹಿಂದೂ ಸಂಘಟನೆಗಳದ್ದು. ಎಂದ ಅವರು ನಮ್ಮ ನೆಲ. ಸಂಸ್ಕೃತಿ ಪರಂಪರೆ, ದೇಶದ ರಕ್ಷಣೆಗೆ ಎದೆಯೊಡ್ಡಿ ನಿಂತವರನ್ನು ಆರಿಸುವುದಕ್ಕಾಗಿ ಹಿಂದೂಗಳೆಲ್ಲರೂ ತಪ್ಪದೇ ಮತದಾನ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದವರು ಹೇಳಿದರು.
ಉದ್ಯಮಿ ಕೆ. ಶ್ರೀಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಡುಬಿದಿರೆ ತಾಲೂಕು ಸಂಘ ಚಾಲಕ ವಿವೇಕಾನಂದ ಕಾಮತ್ ಸಂಪಿಗೆ, ದುರ್ಗಾವಾಹಿನಿಯ ಸಂಯೋಜಕಿ ರಂಜಿನಿ, ಪ್ರಧಾನ ಅರ್ಚಕ ಶಿವಾನಂದ ಶಾಂತಿ ಉಪಸ್ಥಿತರಿದ್ದರು. ಸ್ವಾತಿ ಬೋರ್ಕರ್ ವಂದೇ ಮಾತರಂ ಹಾಡಿದರು. ವಿಹಿಂಪ ಕಾರ್ಯಾಧ್ಯಕ್ಷ ಕೆ.ಶ್ಯಾಮ ಹೆಗ್ಡೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಪ್ರಧಾನ ಕಾರ್ಯದರ್ಶಿ ಸುಚೇತನ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಅನ್ನ ಸಂತರ್ಪಣೆ, ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಜರಗಿತು.