Kundapura: ಎ.4-ಶ್ರೀ ನಾಗಬೊಬ್ಬರ್ಯ, ಹ್ಯಾಗುಳಿ ಹಾಗೂ ಪರಿವಾರ ದೇವಸ್ಥಾನದ ಒಂಭತ್ತನೇ ವರ್ಷದ ವಾರ್ಷಿಕ ವರ್ಧಂತ್ಯುತ್ಸವ
ಕುಂದಾಪುರ: ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ ರಾಯಲ್ ಸಭಾ ಭವನದ ಪಕ್ಕದ ಸ್ಯಾಬರ್ಮಕ್ಕಿಯ ಶ್ರೀ ನಾಗಬೊಬ್ಬರ್ಯ, ಹ್ಯಾಗುಳಿ ಹಾಗೂ ಪರಿವಾರ ದೇವರ ಒಂಭತ್ತನೇ ವರ್ಷದ ವಾರ್ಷಿಕ ವರ್ಧಂತ್ಯುತ್ಸವವು ಎ.4 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅಂದು ಬೆಳಿಗ್ಗೆ 7 ಗಂಟೆಗೆ ಶ್ರೀ ದೇವರಿಗೆ ಫಲ ಸಮರ್ಪಣೆ, ಗುರು ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಪ್ರದಾನ ಹೋಮ, ಕಲಶ ಸ್ಥಾಪನೆ, ಶ್ರೀ ನಾಗ ದೇವರಿಗೆ, ಬೊಬ್ಬರ್ಯ ದೇವರಿಗೆ, ಹ್ಯಾಗುಳಿ ದೇವರಿಗೆ ಹಾಗೂ ಕೀಳು ದೇವರಿಗೆ 'ಕಲಶಾಭಿಷೇಕ' ನಡೆಯಲಿದೆ.
ಬೆಳಿಗ್ಗೆ 11.30ಕ್ಕೆ ನಾಗ ಪಾತ್ರಿಗಳಾದ ಶಂಕರನಾರಾಯಣ ಬಾಯರಿ- ಬೀಜಾಡಿ ಅವರಿಂದ 'ನಾಗ ದರ್ಶನ' ಸೇವೆ, ಮಧ್ಯಾಹ್ನ 12 ಗಂಟೆಗೆ ಪಲ್ಲ ಪೂಜೆ, ಮಹಾಪೂಜೆ, ಮಹಾ ಮಂಗಳಾರತಿ, ತೀರ್ಥ-ಪ್ರಸಾದ ವಿತರಣೆ, ಬಳಿಕ ಸೇವಾ ಕರ್ತರಿಂದ ಸಾರ್ವಜನಿಕ 'ಅನ್ನ ಸಂತರ್ಪಣೆ' ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 5 ಗಂಟೆಗೆ ಶ್ರೀ ಮೈಲಾರೇಶ್ವರ ಮಹಿಳಾ ಭಜನಾ ಮಂಡಳಿ ಮತ್ತು ಶ್ರೀ ಮಾಸ್ತಿಯಮ್ಮ ಭಜನಾ ಮಂಡಳಿ, ಮದ್ದುಗುಡ್ಡೆ, ಕುಂದಾಪುರ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7.30 ಕ್ಕೆ ಸೇವಾ ಕರ್ತರಿಂದ 'ವಿಶೇಷ ರಂಗಪೂಜೆ' ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ರಾತ್ರಿ 9 ಗಂಟೆಗೆ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಇವರ ಸಾರಥ್ಯದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ-ಪಾವಂಜೆ ಇವರಿಂದ 'ಸಂಪೂರ್ಣ ದೇವಿ ಮಹಾತ್ಮೆ' ಎಂಬ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.