Moodubidire: ಕಾಂಗ್ರೆಸ್ನ ಪದ್ಮರಾಜ್ಗೆ ಮತ ಹಾಕಿ ಬಿಜೆಪಿಯನ್ನು ಸೋಲಿಸಿ: ಸಿಪಿಐಎಂನ ಯಾದವ ಶೆಟ್ಟಿ ಕರೆ
Monday, April 1, 2024
ಮೂಡುಬಿದಿರೆ: ದ.ಕ. ಜಿಲ್ಲೆಯಲ್ಲಿ ಕಳೆದ ೩೨ ವರ್ಷಗಳಿಂದ ಬಿಜೆಪಿಯ ಸಂಸದರಿದ್ದರು. ಆದರೆ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಆಗಿದೆ. ಮನು ಸಂಸ್ಕೃತಿಯನ್ನು ಪ್ರತಿಪಾದಿಸುವ ಬಿಜೆಪಿಯು ಅಧಿಕಾರಕ್ಕೆ ಬರಬಾರದು ಆದ್ದರಿಂದ ನಾವು ಕಾಂಗ್ರೆಸ್ನ ಪದ್ಮರಾಜ್ಗೆ ಮತವನ್ನು ಹಾಕಿ ಬಿಜೆಪಿಯನ್ನು ಸೋಲಿಸಬೇಕು ಎಂದು ಸಿಪಿಐಎಂನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ ಕರೆ ನೀಡಿದರು.
ಅವರು ಸೋಮವಾರ ಸಮಾಜ ಮಂದಿರದಲ್ಲಿ ನಡೆದ ಸಿಪಿಐಎಂ ಪಕ್ಷದ ಮೂಡುಬಿದಿರೆ ತಾಲೂಕು ಮಟ್ಟದ ರಾಜಕೀಯ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸನ್ನು ಬೆಂಬಲಿಸಿದರು.
ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ, ಕಾರ್ಮಿಕರ, ಬಡವರ ಪರವಾಗಿ ಅಥವಾ ಭೂ ಸುಧಾರಣೆಯಂತಹ ಹೋರಾಟದಲ್ಲಿ ಎಲ್ಲಿಯೂ ಭಾಗವಹಿಸಿಲ್ಲ ಬದಲಾಗಿ ರಾಜಕೀಯ ಸೇರಿ ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಅವಕಾಶ ಮಾಡಿಕೊಟ್ಟಿದ್ದಾರಷ್ಟೇ ಎಂದು ಆರೋಪಿಸಿದ ಅವರು ಈ ಬಾರಿ ನರೇಂದ್ರ ಮೋದಿಗೆ ಅವಕಾಶ ನೀಡಬಾರದು ಎಂದರು.
ಪಕ್ಷದ ಕಾರ್ಯದರ್ಶಿ ರಮಣಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐಎಂನ ಇನ್ನೋರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ರಾಜಕೀಯ ವಿಷಯಗಳ ಕುರಿತು ಮಾತನಾಡಿದರು. ತಾಲೂಕು ಸಮಿತಿಯ ಸದಸ್ಯರಾದ ರಾಧ, ಗಿರಿಜ, ಲಕ್ಷ್ಮೀ, ಸುಂದರ ಶೆಟ್ಟಿ, ಸೀತಾರಾಮ ಶೆಟ್ಟಿ ಮತ್ತು ಕೃಷ್ಣಪ್ಪ ಕೋಣಾಜೆ ಉಪಸ್ಥಿತರಿದ್ದರು.
