Bantwal: ಬಂಟ್ವಾಳದಲ್ಲಿ ಕುಲಾಲ, ವಿಶ್ವಕರ್ಮ ಸಮಾಜ ಬಾಂಧವರೊಂದಿಗೆ ಬಿಜೆಪಿ ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಸಮಾಲೋಚನೆ
ಬಂಟ್ವಾಳ: ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡ ವೇಳೆ ಕುಲಾಲ ಸಮುದಾಯ ಹಾಗೂ ವಿಶ್ವಕರ್ಮ ಸಮಾಜದ ಪ್ರಮುಖರ ಜೊತೆ ಸಂವಾದ ನಡೆಸಿದರು.
ಬಳಿಕ ಮಾತನಾಡಿದ ಅವರು ರಾಷ್ಟ್ರೀಯತೆ ಮತ್ತು ಹಿಂದೂ ವಿಚಾರಧಾರೆಗಳಿಗೆ ಗೌರವ ತರುವುದರ ಜೊತೆಗೆ ಪ್ರಮಾಣಿಕವಾಗಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಅವರು ತಿಳಿಸಿದರು. ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಕಾರ್ಯಕರ್ತರ ಗೆಲುವು ಪಕ್ಷದ ಗೆಲುವಾಗಲಿದೆ. ಪಕ್ಷ ಸಂಘಟಿತವಾಗುವುದರ ಜೊತೆಗೆ ಅಭ್ಯರ್ಥಿ ಗೆಲುವು ಸಾಧಿಸಿದರೆ ಕಾರ್ಯಕರ್ತ ಬಲಿಷ್ಠವಾಗುತ್ತಾನೆ. ಹಾಗಾಗಿ ಪ್ರತಿಯೊಂದು ಬೂತ್ ಗಳಲ್ಲಿ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿಕೊಂಡು ಬೂತ್ನಲ್ಲಿ ಗೆಲುವು ಸಾಧಿಸಲು ಪ್ರಯತ್ನ ಮಾಡಿ ಎಂದು ಮನವಿ ಮಾಡಿಕೊಂಡರು.
ಚುನಾವಣೆಗೆ ಇನ್ನು ನಾಲ್ಕು ದಿನಗಳು ಬಾಕಿಯಿದ್ದು, ಪ್ರತಿಯೊಂದು ನಿಮಿಷಗಳು ಅತ್ಯಂತ ಪ್ರಾಮುಖ್ಯತೆ ಪಡೆದಿದೆ. ಕಾರ್ಯಕರ್ತರು ವಿರಮಿಸದೆ ನಿರಂತರವಾಗಿ ಮನೆ,ಮನಗಳನ್ನು ಪರಿವರ್ತನೆ ಮಾಡಿ ಬಿಜೆಪಿ ಗೆಲುವಿಗೆ ಕಾರಣರಾಗಿ ಎಂದು ತಿಳಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಎಲ್ಲಾ ಸಮಾಜದ ಮೇಲೆ ಪರಿಣಾಮ ಬೀರುವ ಭವಿಷ್ಯದ ಚುನಾವಣೆ ಇದಾಗಿದ್ದು, ಕಳೆದ 10 ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಕಿಕೊಂಡಿರುವ ಯೋಜನೆಗಳಿಗೆ ಈ ವರ್ಷದ ಲೋಕಸಭಾ ಚುನಾವಣೆ ಶಕ್ತಿ ನೀಡುವಂತಹ ಚುನಾವಣೆಯಾಗಿದೆ ಎಂದು ತಿಳಿಸಿದರು. ಚುನಾವಣೆಗೆ ಉಳಿದಿರುವ ಕೆಲವೇ ದಿನಗಳನ್ನು ಅತ್ಯಂತ ಜವಾಬ್ದಾರಿಯಿಂದ ಸದ್ಬಳಕೆ ಮಾಡಿಕೊಂಡು, ಬಿಜೆಪಿ ಪಕ್ಷವನ್ನು ಬಲಿಷ್ಟಗೊಳಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು. ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಜಗದೀಶ್ ಶೇಣವ ಉಪಸ್ಥಿತರಿದ್ದರು.
ಲೋಕಸಭಾ ಅಭ್ಯರ್ಥಿ ಬಂಟ್ವಾಳದಲ್ಲಿ ಮಾಡಿದ ಪ್ರವಾಸ....:
ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಕುಲಾಲ ಭವನದಲ್ಲಿ ಕುಲಾಲ ಸಮಾಜದವರೊಂದಿಗೆ ಹಾಗೂ ವಿಶ್ವಕರ್ಮ ಸಭಾ ಭವನದಲ್ಲಿ ವಿಶ್ವಕರ್ಮ ಸಮುದಾಯದವರ ಜೊತೆ ಸಂವಾದ ನಡೆಸಿದರು.
ಇತ್ತೀಚಿಗೆ ಅನಾರೋಗ್ಯದ ಕಾರಣದಿಂದಾಗಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು ಅವರ ಮನೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.