Moodubidire: ಸಿಪಿಐಎಂ ಪಕ್ಷದಿಂದ ರಾಜಕೀಯ ಸಾರ್ವಜನಿಕ ಸಭೆ
ಮೂಡುಬಿದಿರೆ: ದ.ಕ. ಜಿಲ್ಲೆಯ ಅಭಿವೃದ್ಧಿ ಮತ್ತು ಸೌಹಾರ್ದತೆಗಾಗಿ ಸಿಪಿಐಎಂ ಮೂಡುಬಿದಿರೆ ತಾಲೂಕು ಸಮಿತಿಯ ವತಿಯಿಂದ ಸೋಮವಾರ ಸ್ವರಾಜ್ಯ ಮೈದಾನದಲ್ಲಿ ಚುನಾವಣಾ ಸಾರ್ವಜನಿಕ ಸಭೆ ನಡೆಯಿತು.
ಸಿಪಿಐಎಂನ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೇಂದ್ರ ದ ಮೋದಿ ಸರಕಾರವು ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವ ಭರವಸೆಯನ್ನು ನೀಡಿತ್ತು ಆದರೆ ಸರಕಾರಿ ಕಚೇರಿಗಳಲ್ಲಿ ಬಾಕಿ ಉಳಿದಿರುವ 50 ಲಕ್ಷದಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಇನ್ನೂ ಸಾಧ್ಯವಾಗಿಲ್ಲವೆಂದು ವ್ಯಂಗ್ಯವಾಡಿದರು.
ತಾವು ನೀಡಿರುವ ಸುಳ್ಳು ಭರವಸೆಗಳ ಬಗ್ಗೆ ಎರಡೂ ಸರಕಾರಗಳು ಜಾಹೀರಾತು ನೀಡುವ ಮೂಲಕ ಆರೋಪ ಪ್ರತ್ಯಾರೋಪಗಳನ್ನು ಮಾಡುವುದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿವೆ. ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಚೊಂಬು ನೀಡಿದೆ ಎಂದು ಕಾಂಗ್ರೆಸ್ ಆರೋಪಿಸಿ ಜಾಹೀರಾತು ನೀಡಿದರೆ ಅದಕ್ಕೆ ವಿರುದ್ಧವಾಗಿ ಬಿಜೆಪಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಗುಡ್ಡಕ್ಕೆ ಬಿಟ್ಟ ದನಗಳು ಕಸಾಯಿಖಾನೆಯಲ್ಲಿರುತ್ತವೆ ಎಂಬ ಜಾಹೀರಾತುಗಳನ್ನು ನೀಡುವ ಮೂಲಕ ನಗೆಪಾಟಲಾಗುತ್ತಿದೆ ಇಂತಹುಗಳಿಗೆ ಪ್ರಜ್ಞಾವಂತರಾದ ನಾವು ಓಟು ಹಾಕಬೇಕೇ ಎಂದು ಪ್ರಶ್ನಿಸಿದ ಅವರು ಕಾಂಗ್ರೆಸ್ ಪಕ್ಷವೂ ನಮಗೇನು ಮಾಡಿಲ್ಲ ಆದರೆ ಬಿಜೆಪಿಗಿಂತ ಕಾಂಗ್ರೆಸ್ ಆಗಬಹುದು ಅವರು ಬಿಜೆಪಿಯಷ್ಟು ಕೆಳಮಟ್ಟದ ರಾಜಕರಣ ಮಾಡಲ್ಲ ಎಂದರು.
ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ, ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ತಾಲೂಕು ಅಧ್ಯಕ್ಷೆ ರಮಣಿ, ಪ್ರಮುಖರಾದ ರಾಧಾ, ಕೃಷ್ಣಪ್ಪ ಕೊಣಾಜೆ, ಗಿರಿಜಾ, ಲಕ್ಷ್ಮೀ, ಆಮ್ ಆದ್ಮಿ ಪಕ್ಷದ ರಾಬಟ್೯ ರೇಗೋ ಮತ್ತಿತರರು ಉಪಸ್ಥಿತರಿದ್ದರು.
