Bantwal: ಸಾರ್ವಜನಿಕರು ಹಾಗೂ ಹೆದ್ದಾರಿ ಗಸ್ತು ತಂಡದ ಮಧ್ಯೆ ಚಕಮಕಿ, ಹೊಡೆದಾಟ-ಇತ್ತಂಡಗಳ ವಿರುದ್ಧ ಕೇಸು ದಾಖಲು
ಬಂಟ್ವಾಳ: ಅವೈಜ್ಞಾನಿಕವಾಗಿ ಹೆದ್ದಾರಿ ಕಾಮಗಾರಿ ನಡೆಸುತ್ತಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಸಾರ್ವಜನಿಕರು ಹಾಗೂ ಹೆದ್ದಾರಿ ಗಸ್ತು ತಂಡದ ಮಧ್ಯೆ ಚಕಮಕಿ ಹೊಡೆದಾಟ ನಡೆದ ಘಟನೆ ಬಿ.ಸಿ.ರೋಡು ಸಮೀಪದ ಪೊನ್ನೊಡಿ ಕೆಎಸ್ಆರ್ಟಿಸಿ ಡಿಪೋ ಬಳಿ ಮಂಗಳವಾರ ಸಂಜೆ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ ಗಸ್ತು ತಂಡದ ಸಿಬ್ಬಂದಿ, ಕುಂದಾಪುರ ತಾಲುಕು, ಶಿಲೂರು-ಬೈಂದೂರು ನಿವಾಸಿ ಚಂದ್ರ ಶೇಷ ಮರಾಠಿ (27) ಅವರು ಮಂಗಳವಾರ ಸಂಜೆ ಅವರು ಗಸ್ತು ಮಾಡುತ್ತಿದ್ದ ವೇಳೆ ಬಿ.ಸಿ ರೋಡಿನ ಕೆ.ಎಸ್.ಆರ್.ಟಿ.ಸಿ ಡಿಪೊ ಬಳಿ, 20ಕ್ಕೂ ಹೆಚ್ಚು ಮಂದಿ ನಾಗರೀಕರು ಕ್ಷುಲ್ಲಕ ಕಾರಣಕ್ಕೆ ಚಂದ್ರಶೇಷ ಅವರ ಜೊತೆ ಇದ್ದ ಮೂವರ ಜೊತೆ ಜಗಳ ಮಾಡಿ, ದಾಳಿಗೆ ಪ್ರಯತ್ನಿಸಿ ಕೈಗಳಿಂದ ಹಲ್ಲೆ ನಡೆಸಿದ್ದಲ್ಲದೆ ಗಸ್ತು ವಾಹನಕ್ಕು ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ. ಪರಿಣಾಮ ವಾಹನದಲ್ಲಿದ್ದವರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುತ್ತಾರೆ ಎಂದು ದೂರಲಾಗಿದೆ.
ಇದಕ್ಕೆ ಪ್ರತಿಯಾಗಿ ಬಿ.ಮೂಡ ನಿವಾಸಿ ಅಬ್ದುಲ್ ಸಮದ್ ಎಂಬವರು ಬಿ.ಮೂಡ ಗ್ರಾಮದ, ಶಾಂತಿಯಂಗಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದಾಗ, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಕಾಮಗಾರಿ ನಡೆಸಲಾಗಿದ್ದು,ಇದರಿಂದಾಗಿ ಪರಿಸರದಲ್ಲಿ ಧೂಳು ಎದ್ದು ಸಾರ್ವಜನಿಕರಿಗೆ ತೊಂದರೆಯಾಗಿ, ಅಪಘಾತಗಳು ಸಂಭವಿಸಿರುತ್ತದೆ ಎಂದು ರಾ.ಹೆ. ಗಸ್ತು ಕರ್ತವ್ಯ ನಿರ್ವಹಿಸುವವರ ಗಮನಸೆಲಕೆಯುತ್ತಾರೆ.
ಈ ವೇಳೆ ರಾಷ್ಟ್ರೀಯ ಹೆದ್ದಾರಿ ಕೆಲಸ ಮಾಡುತ್ತಿರುವವರು ಸಮದ್ ಹಾಗೂ ಇತರರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಪೊಲೀಸರು ಇತ್ತಂಡಗಳ ವಿರುದ್ದ ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.