Mangalore: ಲೋಕಸಭಾ ಚುನಾವಣೆಗೆ ಅನುಕೂಲವಾಗುವಂತೆ ಮೊದಲು ಮತದಾನ ಮಾಡಿ ತದನಂತರ ಕಾರ್ಯಕ್ರಮಕ್ಕೆ ಭಾಗವಹಿಸಿ: ಆಲ್ವಿನ್ ಡಿಸೋಜ ಕರೆ
Thursday, April 18, 2024
ಮಂಗಳೂರು: ಎ.26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಂದು ಮುಂಚಿತವಾಗಿ ನಿಗದಿಪಡಿಸಿದ ಹಲವಾರು ಧಾರ್ಮಿಕ, ಸಾಮಾಜಿಕ, ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಹಾಜರಾಗುವವರು ಮೊದಲು ಮತದಾನ ಮಾಡಿ ತದನಂತರ ಕಾರ್ಯಕ್ರಮಕ್ಕೆ ಭಾಗವಹಿಸಿ, ಅಂತೆಯೇ ಹೊರ ರಾಜ್ಯದಲ್ಲಿದ್ದ ನಿಮ್ಮ ಮಕ್ಕಳು ಹಾಗೂ ಸಂಬಂಧಿಕರನ್ನು ಕರೆಸಿ ಮತದಾನವನ್ನು ಮಾಡಿಸಿ ಎಂದು ಕ್ರೈಸ್ತ ಸಮುದಾಯಕ್ಕೆ ಕಥೊಲಿಕ್ ಸಭಾ ಮಂಗುರ್ ಪ್ರದೇಶ (ರಿ.) ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಕರೆ ನೀಡಿದ್ದಾರೆ.
ಈಗಾಗಲೇ ಚುನಾವಣಾ ಆಯೋಗವು ಹೆಚ್ಚಿನ ಮತದಾನ ನಡೆಸುವ ನಿಟ್ಟಿನಲ್ಲಿ ಹಲವಾರು
ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅತ್ಯಧಿಕ ಮತದಾನ ನಡೆಯಲು ನಾವೆಲ್ಲರೂ ಪ್ರಯತ್ನಿಸಬೇಕು. ಕೆಲಸಕ್ಕೆ ಹೋಗುವವರು ಮೊದಲು ಮತದಾನ ಮಾಡಿ ನಂತರ ಕೆಲಸಕ್ಕೆ ಹೋಗಬೇಕು. ರಜೆಯಿಂದಾಗಿ ಮನೆಯಲ್ಲಿದ್ದವರು ಕಡ್ಡಾಯವಾಗಿ ಮತದಾನ ಮಾಡಿ 100ಶೇ. ಮತದಾನ ಆಗುವಂತೆ ಶ್ರಮಿಸಬೇಕು.
ಪ್ರತಿಯೊಬ್ಬರ ಅಮೂಲ್ಯ ಮತದಿಂದ ಉತ್ತಮ ಸರ್ಕಾರ ರಚನೆ ಸಾಧ್ಯ. ಮತದಾನ ನಮ್ಮ ಹಕ್ಕು, ತಪ್ಪಿದಲ್ಲಿ ಮುಂದಿನ ಅನಾಹುತಗಳಿಗೆ ನಾವೇ ಕಾರಣಕರ್ತರು ಆಗುತ್ತೇವೆ ಎಂದು ಆಲ್ವಿನ್ ಡಿಸೋಜ ತಿಳಿಸಿದ್ದಾರೆ.