Mangalore: ಚುನಾವಣಾ ಪ್ರಕ್ರಿಯೆ ವಿಳಂಬ ಸರಿಯಲ್ಲ: ವೀರಪ್ಪ ಮೊಯ್ಲಿ
ಮಂಗಳೂರು: ದೇಶದ ಮಹತ್ವದ ಲೋಕಸಭಾ ಚುನಾವಣೆ ಈ ಹಿಂದೆ 20 ದಿನಗಳಲ್ಲಿ ಪೂರ್ಣಗೊಳ್ಳುತ್ತಿತ್ತು. ಆದರೆ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದರೂ ಈ ಬಾರಿ ಚುನಾವಣೆ ಸುಮಾರು 60 ದಿನಗಳ ಕಾಲ ನಡೆಯುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿವೆ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದರು.
ಅವರು ಭಾನುವಾರ ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಲೋಕಸಭಾ ಚುನಾವಣೆಯನ್ನು ನಡೆಸಲು ಇಷ್ಟು ಸಮಯವನ್ನು ತೆಗೆದುಕೊಳ್ಳುತ್ತಿದ್ದು, ಮೋದಿಯವರ ಪರಿಕಲ್ಪನೆಯ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಬಂದಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆಯ ಚುನಾವಣೆ, ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ನಡೆಸಲು ಒಂದು ವರ್ಷ ಬೇಕಾದಿತು ಎಂದು ಲೇವಡಿ ಮಾಡಿದರು.
2014 ರ ಚುನಾವಣೆಯಲ್ಲಿ ಕಪ್ಪು ಹಣ ತರುವುದಾಗಿ ಹೇಳಿದ ಹೇಳಿ ಅಧಿಕಾರಕ್ಕೆ ಬಂದ ಮೋದಿ ಅವರು ಇಲ್ಲಿಯ ತನಕ ಒಂದು ರೂಪಾಯಿ ತರಲಿಲ್ಲ ನಾನು ಹಣಕಾಸು ಸಚಿವನಾಗಿದ್ದ ಸಂದರ್ಭದಲ್ಲಿ ಕಪ್ಪು ಹಣದ ಬಗ್ಗೆ ವರದಿ ಸಿದ್ದಪಡಿಸಿ, 40 ಸಾವಿರ ಕೋಟಿ ಹಣವನ್ನು ತರಿಸಲಾಗಿದೆ. ನಂತರ 35 ಸಾವಿರ ಕೋಟಿ ಬಾಕಿ ಇದ್ದು, ನಾನು ನೀಡಿದ ವರದಿಯನ್ನು ತೋರಿಸಿ ಕಪ್ಪು ಹಣ ತರುವುದಾಗಿ ಮೋದಿ ಹೇಳಿದ್ದಾರೆ. ಅವರು ಹೇಗೆ ಕಪ್ಪು ಹಣವನ್ನು ತರಬೇಕು ಎಂಬುವುದಾಗಿ ನನ್ನಲ್ಲಿ ಕೇಳಿದ್ದರೆ ನಾನು ಸಲಹೆ ನೀಡುತ್ತಿದ್ದೆ ಎಂದು ಹೇಳಿದರು.
ದೇಶದಲ್ಲಿ ರೈತರ ಆದಾಯವನ್ನು ದ್ವೀಗುಣ ಪಡಿಸುವುದಾಗಿ ಹೇಳಿ ಅವರಿಗೆ ಇಲ್ಲಿಯ ತನಕ ಅನ್ಯಾಯ ಮಾಡಿದ್ದಾರೆ. ಒಬ್ಬ ರೈತನ ಸಾಲವನ್ನೂ ಮನ್ನ ಮಾಡಿಲ್ಲ. ಮನಮೋಹನ್ ಸಿಂಗ್ ಪ್ರಧಾನಮಂತ್ರಿಗಳಾಗಿದ್ದ ಸಂದರ್ಭ ದೇಶದಾದ್ಯಂತ 76 ಸಾವಿರ ಕೋಟಿಯನ್ನು ಮನ್ನ ಮಾಡಿದ್ದಾರೆ. ಸ್ವಾಮಿನಾಥನ್ ವರದಿಯನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ನಾವು ಅಧಿಕಾರ ಕಳೆದುಕೊಂಡೆವು ಅದು ಇಲ್ಲಿಯ ತನಕ ಅನುಷ್ಠಾನವಾಗಿಲ್ಲ ಎಂದರು.
ದೇಶದಲ್ಲಿ ಬೆಲೆ ಏರಿಕೆ, ಆರ್ಥಿಕ ಅಸಮಾನತೆ, ನಿರುದ್ಯೋಗ ಸಮಸ್ಯೆ ಕಾರಣ ಕೇಂದ್ರ ಸರಕಾರದ ವಿರುದ್ಧ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಾಕ್ರೋಶ ಸ್ಫೋಟಗೊಳ್ಳಲಿದೆ. ಎನ್ಡಿಎ ಮತ್ತೆ ಬಹುಮತ ಗಳಿಸುವುದಿಲ್ಲ. ಬಿಜೆಪಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದೆ. ಮೋದಿಯವರ ಆಡಳಿತದ ಅವಧಿಯಲ್ಲಿ ಶೇ.1ರಷ್ಟು ಜನರಲ್ಲಿ ದೇಶದ ಸಂಪತ್ತು ಶೇಖರಣೆ ಯಾಗಿದೆ. ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಜಗತ್ತಿನ ಹಲವು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಬಡತನ ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ ಗರಿಷ್ಠ ಪ್ರಮಾಣಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ಸೇರಿದಂತೆ ಇಂಧನ ಬೆಲೆ ಏರಿಕೆಯಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯರು ಬವಣೆ ಪಡುವಂತಾಗಿದೆ ಎಂದು ವೀರಪ್ಪ ಮೊಯ್ಲಿ ಹೇಳಿದರು.
ಚೊಂಬು ಅತ್ಯುತ್ತಮ ಜಾಹೀರಾತು:
ಕರ್ನಾಟಕಕ್ಕೆ ಸಂವಿಧಾನದ ಪ್ರಕಾರ ನೀಡಬೇಕಾದ ತೆರಿಗೆಯ ಪಾಲನ್ನು ನೀಡದೆ ಕೇಂದ್ರ ಸರಕಾರ ಖಾಲಿ ಚೊಂಬು ನೀಡಿದೆ. ಈ ಬಗ್ಗೆ ಕೆಪಿಸಿಸಿ ಪ್ರಕಟಿಸಿದ ಜಾಹೀರಾತು ಅತ್ಯಂತ ಸೂಕ್ತವಾಗಿದೆ ಎಂದು ಮೊಯ್ಲಿ ಪ್ರತಿಪಾದಿಸಿದರು.
ಚುನಾವಣೆಯಲ್ಲಿ ಬಹುಮತ ಪಡೆಯಲು ಸಾಧ್ಯವಾಗಿಲ್ಲ.ಮೋದಿ ಆಡಳಿತದ ಬಗ್ಗೆ ಯುವ ಜನರು ನಿರಾಸಕ್ತಿ ಹೊಂದಿದ್ದಾರೆ. ದೇಶದಲ್ಲಿ ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದಾರೆ. ಈ ಪರಿಸ್ಥಿತಿ ಸ್ಫೊಟಗೊಂಡರೆ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮೊಯ್ಲಿ ತಿಳಿಸಿದ್ದಾರೆ.
ಮಾಜಿ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ, ಕಾಂಗ್ರೆಸ್ ಪದಾಧಿಕಾರಿಗಳಾದ ಶಶಿಧರ ಹೆಗ್ಡೆ, ಭಾಸ್ಕರ ಕೆ., ಜಾನ್ ಕೆನಾನ್, ಅಶ್ವಿನ್ ಕುಮಾರ್, ಮಹಾಬಲ ಮಾರ್ಲ, ಅಶ್ರಫ್ ಕೆ, ಶಾಹುಲ್ ಹಮೀದ್, ಡಿ.ಕೆ.ಅಶೋಕ್, ಆರಿಫ್, ಶಬೀರ್ ಸಿದ್ದಕಟ್ಟೆ, ಟಿ.ಕೆ.ಸುದೀರ್ ಮೊದಲಾದವರು ಉಪಸ್ಥಿತರಿದ್ದರು.