Moodubidire: ಜೈನಕಾಶಿಯಲ್ಲಿ ಭಗವಾನ್ ಮಹಾವೀರ ಸ್ವಾಮಿಯ 2623ನೇ ಜನ್ಮಕಲ್ಯಾಣೋತ್ಸವ
ಮೂಡುಬಿದಿರೆ: ಭಗವಾನ್ ಶ್ರೀ ಮಹಾವೀರ ಸ್ವಾಮಿಯವರ 2623ನೇ ಜನ್ಮ ಕಲ್ಯಾಣ ಮಹೋತ್ಸವವು ಭಾನುವಾರ ಜೈನ ಕಾಶಿ ಮೂಡುಬಿದಿರೆಯ ಶ್ರೀ ಮಹಾವೀರ ಭವನದಲ್ಲಿ ವಿಶೇಷ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ ಮಹಾವೀರರ ಬೋಧನೆಗಳು ಸಾರ್ವಕಾಲಿಕವಾಗಿದ್ದು. ಸತ್ಯ, ಅಹಿಂಸೆ, ಅಪರಿಗ್ರಹ, ಆಚೌರ್ಯ ಮತ್ತು ಬ್ರಹ್ಮಚರ್ಯ ಮೊದಲಾದ ಪಂಚ ಅಣು ವ್ರತಗಳನ್ನು ಪಾಲಿಸುವುದರ ಮೂಲಕ ಆತ್ಮ ಕಲ್ಯಾಣವಾಗಿ ಪ್ರತಿಯೊಂದು ಜೀವಾತ್ಮ ಕೂಡಾ ಪರಮಾತ್ಮ ಪದವಿಯನ್ನು ಪಡೆಯಬಹುದು. ಮನುಷ್ಯ ಜನ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ತಾನು ಜೀವಿಸುವುದರೊಂದಿಗೆ ಇನ್ನೊಂದು ಜೀವರಾಶಿಯನ್ನು ಕೂಡಾ ಜೀವಿಸಲು ಬಿಡುವುದೇ ಧರ್ಮ ಎಂದು ಹೇಳಿದರು.
ಮುಖ್ಯ ಉಪನ್ಯಾಸಕರಾಗಿ ಹಿರಿಯ ಸಾಹಿತಿ ಮೂಡಬಿದಿರೆ ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ಬಿ.ಪಿ. ಸಂಪತ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಕೂಡಾ ಜೀವನದಲ್ಲಿ ಸಣ್ಣ ಸಣ್ಣ ವ್ರತ ನಿಯಮಗಳನ್ನು ಮಾಡುವುದರ ಮೂಲಕ ಅಹಿಂಸಾ ವ್ರತವನ್ನು ಪರಿ ಪಾಲನೆ ಮಾಡಬೇಕೆಂದ ಅವರು ಮಧು, ಮದ್ಯ ಮಾಂಸ ಆಹಾರಗಳ ತ್ಯಾಗದಿಂದ ಆತ್ಮ ಕಲ್ಯಾಣ ಮಾಡಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದರು.
ಮೂಡಬಿದಿರೆ ಅಲಂಗಾರು ಮೌಂಟ್ ರೋಸರಿ ಚಾರಿಟಬಲ್ ಟ್ರಸ್ಟ್ ನವರು ನಡೆಸುವ ವೃದ್ಧಾಶ್ರಮಕ್ಕೆ ಮದ್ಯಾಹ್ನದ ಆಹಾರ ದಾನವನ್ನು ನೀಡಲಾಯಿತು.
ಮಂಗಳೂರಿನ ಎ.ಜೆ. ಆಸ್ಪತ್ರೆಯ ವರ ಸಹಭಾಗಿತ್ವದಲ್ಲಿ ಮೂಡಬಿದಿರೆಯ ಜೈನ್ ಮೆಡಿಕಲ್ ಸೆಂಟರ್ ನವರು ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಸುಮಾರು 75 ಜನ ರಕ್ತದಾನ ಮಾಡಿದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಭ. ಮಹಾವೀರ ಸ್ವಾಮಿಗೆ ಪಂಚಾಮೃತ ಅಭಿಷೇಕ,ಸಾಮೂಹಿಕ ಅಷ್ಟ ವಿದಾರ್ಚನೆ ಪೂಜೆ ನಡೆಯಿತು. ಬೆಳಿಗ್ಗೆ ಜೈನ ಮಠದಿಂದ ಬೆಳ್ಳಿಯ ಪಲ್ಲಕ್ಕಿಯಲ್ಲಿ ದೇವ, ಶಾಸ್ತ್ರ ಗುರುಗಳನ್ನು ಹೊತ್ತು ಬೆಟ್ಕೆರಿ ಮಹಾವೀರ ಸ್ವಾಮಿ ಬಸದಿಗೆ ತೆರಳಿ ಅಲ್ಲಿ ಸ್ವಾಮಿಗೆ ಕ್ಷೀರಾಭಿಷೇಕ ನಡೆಸಲಾಯಿತು.
ಪಟ್ನಶೆಟ್ಟಿ ಸುಧೇಶ್ ಕುಮಾರ್, ಮೋಕೆಸರ ರಾದ ಆನಡ್ಕ ದಿನೇಶ್ ಕುಮಾರ್ ಕಾರ್ಯಾಧ್ಯಕ್ಷ ಶೈಲೇಂದ್ರ ಕುಮಾರ್ ಉಪಸ್ಥಿತರಿದ್ದರು. ಜನ್ಮ ಕಲ್ಯಾಣ ಸಮಿತಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಅನಂತ್ ವೀರ ಜೈನ್ ವಂದಿಸಿ, ಉಪನ್ಯಾಸಕ ನಿರಂಜನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅಳಿಯೂರು ಆದಿರ ಅವರ ಶಾಂತಿ ಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಸಮಾಪನೆಗಂಡಿತು.