Mangalore: ಪ್ರಧಾನಿಯನ್ನು ಹತ್ತಿರದಿಂದ ಕಾಣಲು ಅವಕಾಶ: ವೇದವ್ಯಾಸ್ ಕಾಮತ್
ಮಂಗಳೂರು: ಎ14ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ಅವರನ್ನು ಸಮೀಪದಿಂದ ಕಾಣುವ ಉತ್ತಮ ಅವಕಾಶ ಇದಾಗಿದ್ದು, ಮಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ರೋಡ್ ಶೋ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದೆ. ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸುವುದರಿಂದ ಸ್ವಲ್ಪವೂ ಲೋಪವಾಗದಂತೆ ಅಚ್ಚುಕಟ್ಟಾಗಿ ನಡೆಸಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಈಗಾಗಲೇ ಮಂಗಳೂರು ಜನತೆಗೆ ಮೋದಿ ರೋಡ್ ಶೋನಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ ಎಂದರು.
ಲೇಡಿಹಿಲ್ನ ನಾರಾಯಣಗುರು ವೃತ್ತದಿಂದ ಲಾಲ್ಬಾಗ್, ಪಿವಿಎಸ್ ಆಗಿ ನವಭಾರತ ವೃತ್ತ ವರೆಗೆ ಮೋದಿ ಅವರ ರೋಡ್ ಶೋ ನಡೆಯಲಿದೆ. 2 ಕಿ.ಮೀ. ದೂರದ ಈ ದಾರಿಯುದ್ಧಕ್ಕೂ ಕೇಸರಿ, ಬಿಜೆಪಿ ಧ್ವಜ, ಪತಾಕೆಗಳಿಂದ ಅಲಂಕರಿಸಲಾಗಿದೆ. ಮೋದಿ ಅವರು ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಲಿದ್ದಾರೆ.
ರೋಡ್ ಶೋಗೆ ಆಗಮಿಸುವ ಏಳೆಂಟು ಕಡೆಗಳಲ್ಲಿ ತುಸು ಎತ್ತರದ ವೇದಿಕೆಯಲ್ಲಿ ಕರಾವಳಿಯ ಜನಪದ ಸೊಬಗನ್ನು ಪ್ರಧಾನಿಗೆ ಪರಿಚಯಿಸುವ ಕಾರ್ಯಕ್ರಮ ಏರ್ಪಾಟಾಗಲಿದೆ. ಅಲ್ಲದೆ ಆಯ್ದ
ಸ್ಥಳಗಳಲ್ಲಿ ಪಕ್ಷದ ನಾಯಕರು ನಿಂತು ರೋಡ್ ಶೋ ವೀಕ್ಷಿಸಲಿದ್ದಾರೆ. ಸುಮಾರು 5 ಸಾವಿರ ಕೇಜಿಯ ಪುಷ್ಪಗಳ ವೃಷ್ಟಿಯನ್ನು ಪ್ರಧಾನಿ ರೋಡ್ ಶೋ ವೇಳೆ ಮಾಡಲಾಗುವುದು ಎಂದರು.
ರೋಡ್ ಶೋ ನಡೆಯುವ ಇಕ್ಕೆಲಗಳಲ್ಲೂ ಭಾರಿ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ನಿಂತು ವೀಕ್ಷಿಸಲಿದ್ದಾರೆ. ರೋಡ್ ಶೋ ರಾತ್ರಿ 7.45ಕ್ಕೆ ಆರಂಭವಾಗಿದ್ದು, 8.45ಕ್ಕೆ ಮುಕ್ತಾಯವಾಗಲಿದೆ. ಹಾಗಾಗಿ ರೋಡ್ಶೋಗೆ ಆಗಮಿಸುವವರು ರಾತ್ರಿ 7 ಗಂಟೆ ಮೊದಲು ಬ್ಯಾರಿಕೇಡ್ಗಳ ಬಳಿ ಉಪಸ್ಥಿತರಿರಬೇಕು. ಇದರಿಂದ ಟ್ರಾಫಿಕ್ ಹಾಗೂ ತಪಾಸಣೆ ವಿಳಂಬವನ್ನು ತಪ್ಪಿಸಬಹುದು ಎಂದರು.