Mangalore: ಕಾರ್ಮಿಕ ವರ್ಗದ ಶ್ರಮವಿಲ್ಲದೆ ಜಗತ್ತು ಮುನ್ನಡೆಯಲು ಸಾಧ್ಯವಿಲ್ಲ: ಡಾ. ಕೃಷ್ಣಪ್ಪ ಕೊಂಚಾಡಿ
ಮಂಗಳೂರು: 8 ಗಂಟೆಗಳ ದುಡಿಮೆಗಾಗಿ 139 ವರ್ಷಗಳ ಹಿಂದೆ ಅಮೇರಿಕಾದ ಚಿಕಾಗೋ ನಗರದ ಕಾರ್ಮಿಕರು ನಡೆಸಿದ ಐತಿಹಾಸಿಕ ಹೋರಾಟ ಆಕಸ್ಮಿಕವೇನಲ್ಲ. ಅಂದಿನ ಬಂಡವಾಳಶಾಹಿಗಳ ಲಾಭಕೋರತನದಿಂದ ಆಕ್ರೋಶಿತಗೊಂಡ ಕಾರ್ಮಿಕರು 16 ಗಂಟೆಗಳ ದುಡಿಮೆಯ ವಿರುದ್ದ ದಶಕಗಳ ಕಾಲ ಪ್ರಬಲ ಹೋರಾಟ ನಡೆಸಿದ್ದರ ಪರಿಣಾಮವಾಗಿ ಕೊನೆಗೆ 8 ಗಂಟೆಗಳ ದುಡಿಮೆಯ ಕೂಗು ಜಗತ್ತಿನಾದ್ಯಂತ ಮಾರ್ದನಿಸಿ ಮೇ ದಿನಾಚರಣೆಯುಂಟಾಯಿತು ಎಂದು ಎಂದು ಜಿಲ್ಲೆಯ ಪ್ರಗತಿಪರ ಚಿಂತಕರೂ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ಹೇಳಿದರು.
ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಇಂದು ಮಂಗಳೂರಿನಲ್ಲಿ ಜರುಗಿದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯ ಪ್ರಾರಂಭದಲ್ಲಿ ನೂರಾರು ಸಂಖ್ಯೆಯ ಕಾರ್ಮಿಕರು ಮಂಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಆಕರ್ಷಕ ಮೆರವಣಿಗೆಯನ್ನು ನಡೆಸುವ ಮೂಲಕ ಕಾರ್ಮಿಕ ವರ್ಗದ ಐಕ್ಯತೆಯನ್ನು ಪ್ರದರ್ಶಿಸಿದರು.
ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ ಎಂಬ ಕರೆ ನೀಡುವ ಕಾರ್ಮಿಕ ವರ್ಗ ಸಮಸ್ತ ಮಾನವಕುಲದ ಏಳಿಗೆಗಾಗಿ ಶ್ರಮಿಸುತ್ತಿದ್ದು ವಿಶ್ವ ಮಾನವ ಸಂದೇಶದ ಜೊತೆಗೆ ನಿಜವಾದ ದೇಶಪ್ರೇಮವನ್ನು ಜನತೆಗೆ ಭೋದಿಸುತ್ತದೆಯೇ ಹೊರತು ಬಂಡವಾಳಶಾಹಿಗಳ ಲಾಭನಷ್ಟ ಲೆಕ್ಜಾಚಾರದ ಕಪಟ ದೇಶಪ್ರೇಮವನ್ನಲ್ಲ ಎಂದರು.
ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಇಂದಿನ ಬಂಡವಾಳಶಾಹಿ ವ್ಯವಸ್ಥೆ ರೈತ ಕಾರ್ಮಿಕರ ಹಾಗೂ ಜನಸಾಮಾನ್ಯರ ಪ್ರಶ್ನೆಗಳನ್ನು ಇತ್ಯರ್ಥ ಪಡಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಬಂಡವಾಳಶಾಹಿಗಳ ದುರಾಸೆ ಕಾರ್ಮಿಕ ವರ್ಗವನ್ನು ಹಿಂಡಿಹಿಪ್ಪೆ ಮಾಡುತ್ತಿದ್ದು, ಸಾರ್ವಜನಿಕ ಸಂಪತ್ತನ್ನು ಹಾಗೂ ನೈಸರ್ಗಿಕ ಸಂಪತ್ತನ್ನು ಕೂಡ ಲೂಟಿ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಚುನಾವಣಾ ಬಾಂಡ್ ಹಗರಣ ಜಗತ್ತಿನಾದ್ಯಂತ ಕುಖ್ಯಾತಿ ಪಡೆದಿದ್ದು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೋದಿ ಸರ್ಕಾರದ ಇನ್ನೊಂದು ಮುಖವನ್ನು ಜಗಜ್ಜಾಹೀರುಗೊಳಿಸಿದೆ. ಅದೇ ರೀತಿ ಭೇಟಿ ಬಚಾವೋ ಭೇಟಿ ಪಡಾವೋ ಘೋಷಣೆಯನ್ನು ಕರ್ನಾಟಕದ ಸಂಸದ ಪ್ರಜ್ವಲ್ ರೇವಣ್ಣರವರ ಪೆನ್ಡ್ರೈವ್ ಹಗರಣ ಅಣಕಿಸುತ್ತಿದೆ. ನೂರಾರು ಹೆಣ್ಣು ಮಕ್ಕಳ ಬದುಕನ್ನು ಸರ್ವನಾಶ ಮಾಡಿದ ಇಂತಹ ಹಗರಣದ ಬಗ್ಗೆ ಆಳುವ ವರ್ಗದ ಜನಪ್ರತಿನಿಧಿಗಳು ಚಕಾರ ಶಬ್ದವೆತ್ತುತ್ತಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ಕೊಲೆ ಅತ್ಯಾಚಾರ ಪ್ರಕರಣಗಳು ದಿನನಿತ್ಯದ ಮಾತಾಗುತ್ತಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಮೇ ದಿನ ಆಚರಣಾ ಸಮಿತಿಯ ಗೌರವಾಧ್ಯಕ್ಷ ಬಿ.ಎನ್. ದೇವಾಡಿಗ ಮಾತನಾಡಿ, ದೇಶದ ಅರ್ಥ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡವಿದ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಜಾತ್ಯಾತೀತ ಪರಂಪರೆಗಳು ಗಂಭೀರ ಸ್ವರೂಪವನ್ನು ತಾಳಲಿದ್ದು ದೇಶದ ಸಂವಿಧಾನವನ್ನೇ ಬದಲಾಯಿಸಿ ಅರಾಜಕತೆಯನ್ನು ಸ್ರಷ್ಠಿಸಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೇ ದಿನಾಚರಣಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಕೆ ಇಮ್ತಿಯಾಜ್, ಅಧ್ಯಕ್ಷ ಮಹಮ್ಮದ್ ಮುಸ್ತಾಫ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಕೊಂಚಾಡಿ, ಹಿರಿಯ ಕಾರ್ಮಿಕ ಮುಖಂಡರಾದ ಯು.ಬಿ. ಲೋಕಯ್ಯ, ಜಯಂತಿ ಶೆಟ್ಟಿ, ಭಾರತಿ ಬೋಳಾರ, ಜಿಲ್ಲೆಯ ಹಿರಿಯ ಚಿಂತಕರಾದ ವಾಸುದೇವ ಉಚ್ಚಿಲ್, ಎರಿಕ್ ಲೋಬೋ, ಲಕ್ಷ್ಮಣ್ ವಾಮಂಜೂರು, ಕರಿಯ ಕೆ, ವಸಂತ ಕುಮಾರ್, ಯುವ ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ದೀಪಕ್ ಬಜಾಲ್, ಪ್ರದೀಪ್, ಕಾರ್ಮಿಕ ನಾಯಕರಾದ ಜಯಲಕ್ಷ್ಮಿ, ರಫೀಕ್ ಹರೇಕಳ, ಶಶಿಧರ್ ಶಕ್ತಿನಗರ, ಉಮೇಶ್, ಮಹಿಳಾ ಮುಖಂಡರಾದ ಪ್ರಮೀಳಾ ಶಕ್ತಿನಗರ, ಪ್ರಮೀಳಾ ದೇವಾಡಿಗ, ಅಸುಂತ ಡಿಸೋಜ, ಯೋಗಿತಾ ಮತ್ತಿತರರು ಉಪಸ್ಥಿತರಿದ್ದರು.





