Mangalore: ಕಾಡಿದ ಭಾವದ ಸಣ್ಣ ಎಳೆಯೇ ಕವಿತೆ: ಸ್ಮೃತಿ ಅಮೃತರಾಜ್
Thursday, May 2, 2024
ಮಂಗಳೂರು: ಅನುಭವವನ್ನು ಅನುಭಾವಕ್ಕೆ ಇಳಿಸಿದಾಗ ಕವಿತೆ ಹುಟ್ಟಿಕೊಳ್ಳುತ್ತದೆ. ಏಕಾಂತದಲ್ಲಿ ಹುಟ್ಟಿದ ಕವಿತೆ ಲೋಕಾಂತಕ್ಕೆ ನೀಡಿದ ಮೇಲೆ ಅದರ ಕುರಿತು ಮಾತನಾಡುವುದು ಅನಾವಶ್ಯಕ ಎಂದು ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ಸ್ಮೃತಿ ಅಮೃತರಾಜ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ಕವಿ ಸಮಯ ಕಾರ್ಯಕ್ರಮ ಉದ್ಘಾಟಿಸಿ, ಬದುಕಿನಲ್ಲಿ ಕಾಡಿದ, ಅನುಭವಕ್ಕೆ ಸಿಕ್ಕ ಭಾವನೆಗಳ ಸಣ್ಣ ಎಳೆಯೇ ಕವಿತೆಯಾಗಿ ಹೊರಹೊಮ್ಮುತ್ತದೆ ಎಂದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತೆ ಸಹನಾ ಕಾಂತಬೈಲು, ಬರಹಗಾರನಿಗೆ ಬರವಣಿಗೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ಎಂಬುದು ಮೊದಲ ಆದ್ಯತೆಯಾಗಿರಬೇಕಾಗುತ್ತದೆ. ಬರವಣಿಗೆಯ ಹುಟ್ಟು ಎಂದಿಗೂ ಅಂತರಂಗದ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ್ ಎಂ.ಕೆ., ಕನ್ನಡ ಸಂಘದ ಸಂಯೋಜಕ ಡಾ. ನಾಗೇಶ್, ವಿಭಾಗದ ಉಪನ್ಯಾಸಕರಾದ ಡಾ. ಮಧು ಬಿರಾದಾರ, ಡಾ. ಶೈಲಾ, ಡಾ. ಅಶ್ವಿನಿ, ಡಾ. ವೆಂಕಟೇಶ್ ಉಪಸ್ಥಿತರಿದ್ದರು.