Mangalore: ವಿದ್ಯಾರ್ಥಿಗಳು ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಿ: ಪಿ. ಶ್ರೀಧರ್
ಮಂಗಳೂರು: ವಿದ್ಯಾರ್ಥಿಗಳು ಹುಟ್ಟು ಹಬ್ಬದ ಆಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಬೇಕೆಂದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಹೇಳಿದರು.
ಅವರು ಜೂನ್ 5 ರಂದು ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತಿನ ತಾಪಮಾನವು ಅಧಿಕವಾಗುತ್ತಿರುವ ಸಂದರ್ಭದಲ್ಲಿ ನಾವು ಜಾಗೃತರಾಗುವ ಅವಶ್ಯಕತೆಯಿದೆ. ನಾವು ನಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಬೇಕು. ನಾವೆಲ್ಲರೂ ನಮ್ಮ ಹುಟ್ಟು ಹಬ್ಬದ ದಿನ ಕೇಕ್ ಕಟ್ ಮಾಡುವುದರ ಜೊತೆಗೆ ಗಿಡ ನೆಟ್ಟಾಗ ಪರಿಸರದಲ್ಲಿ ಬದಲಾವಣೆ ಮಾಡಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿ. ಶ್ರೀಧರ್ ಶಾಲೆಗೆ ಅತ್ಯಂತ ಶ್ರೇಷ್ಠವಾದ ಶ್ರೀಗಂಧ ಹಾಗೂ ಇತರ ಸಸಿಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ಗಿಡ ಬೆಳೆಸುವುದರ ಜಾಗೃತಿಯನ್ನು ಮೂಡಿಸಿದರು.
ಶಕ್ತಿ ವಿದ್ಯಾಸಂಸ್ಥೆಯ ಮುಖ್ಯ ಸಲಹೆಗಾರ ರಮೇಶ್ ಕೆ. ಮಾತನಾಡಿ, ಮುಂಬರುವ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಗಿಡವನ್ನು ನೆಡುವಂತೆ ಸಲಹೆಯನ್ನು ನೀಡಿದರು.
ಪ್ರಾಂಶುಪಾಲೆ ಬಬಿತ ಸೂರಜ್ ಸ್ವಾಗತಿಸಿದರು, ಶಾಲಾ ಶಿಕ್ಷಕಿ ಮಧುರ ವಂದಿಸಿ, ಆನೆಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವಿಶ್ವ ಪರಿಸರ ದಿನಾಚರಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಎಂಟನೇ ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಜಾಥಾ ಹೋಗುವುದರ ಮೂಲಕ ಘೋಷಣೆ ಕೂಗುತ್ತಾ ಜನರಿಗೆ ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸಿದರು. ಹಾಗೆಯೇ ವಿದ್ಯಾರ್ಥಿಗಳು ಪರಿಸರ ಮತ್ತು ನೀರಿನ ಸಂರಕ್ಷಣೆಯ ಮಹತ್ವದ ಅರಿವು ಮೂಡಿಸುವ ಸಲುವಾಗಿ ಶಕ್ತಿ ನಗರದ ಜಂಕ್ಷನ್ನಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿದರು.
ಒಂದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶ್ವ ಪರಿಸರ ದಿನಾಚರಣೆಯ ಕುರಿತು ತರಗತಿಯಲ್ಲಿ ಚಟುವಟಿಕೆಗಳನ್ನು ನೀಡಲಾಯಿತು.











