Mangalore: ಜಿಲ್ಲೆಯ ಅಭಿವೃದ್ಧಿ ಹಾಗೂ ಕೋಮು ಸೌಹಾರ್ದಕ್ಕೆ ಸಂಸದರಿಗೆ ನಾನು ಸದಾ ಬೆಂಬಲಿಸಲು ಸಿದ್ದ: ಪದ್ಮರಾಜ್ ಆರ್. ಪೂಜಾರಿ
ಮಂಗಳೂರು: ಜಿಲ್ಲೆಯ ಅಭಿವೃದ್ಧಿ ಹಾಗೂ ಕೋಮು ಸೌಹಾರ್ದಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನೂತನ ಸಂಸದರನ್ನು ಮುಂದೆಯೂ ಎಲ್ಲಾ ರೀತಿಯಲ್ಲಿ ಬೆಂಬಲಿಸಲು ಸದಾ ಸಿದ್ಧನಿದ್ದೇನೆ ಎಂದು ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸೋಲಿನ ಬಳಿಕದ ಪ್ರಥಮ ಸುದ್ದಿಗೋಷ್ಠಿಯಲ್ಲಿ ಈ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅಭ್ಯರ್ಥಿ ಹಾಗೂ ಸಂಸದರಾಗಿ ಆಯ್ಕೆಯಾದ ಕ್ಯಾ. ಬ್ರಿಜೇಶ್ ಚೌಟರನ್ನು ಅಭಿನಂದಿಸಿ ಮಾತು ಮುಂದುವರಿಸಿ, ನೂತನ ಸಂಸದರು ಇತರ ಎಲ್ಲಾ ವಿಚಾರಗಳನ್ನು ಬಿಟ್ಟು ಜಿಲ್ಲೆಯ ಅಭಿವೃದ್ಧಿಯ ಮೂಲಕ ಸಾಮರಸ್ಯದ ಗತ ವೈಭವವನ್ನು ಮರಳಿ ತರುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಕರಾವಳಿಯಲ್ಲಿ ಕಾಂಗ್ರೆಸ್ಗೆ ಪ್ರತಿಕೂಲವಾದ ವಾತಾವರಣದ ಮಧ್ಯೆಯೂ ಪಕ್ಷ ಉತ್ತಮ ಸಾಧನೆ ಮಾಡಿರುವ ತೃಪ್ತಿ ಇದೆ. ಟಿಕೆಟ್ ಬಳಿಕ ಮತದಾರರನ್ನು ಭೇಟಿಯಾಗಲು ಸಿಕ್ಕಿದ ಕೆಲವೇ ದಿನಗಳ ಕಾಲಾವಧಿಯಲ್ಲಿ ಜಿಲ್ಲೆಯ 6.15 ಲಕ್ಷ ಮತದಾರರ ಮನಸ್ಸು ಗೆಲ್ಲಲು ಸಾಧ್ಯವಾಗಿರುವ ಬಗ್ಗೆ ಖುಷಿ ಇದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಸಂಘಟಿಸುವ ಕಾರ್ಯವನ್ನು ನಡೆಸುವುದಾಗಿ ಹೇಳಿದರು.
ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಗೌರವ ನೀಡಿ ಪಕ್ಷದ ಹಿರಿಯ ನಾಯಕರು ಟಿಕೆಟ್ ನೀಡಿದರೆ, ಪಕ್ಷದ ಕಾರ್ಯಕರ್ತರು ಹಗಲಿರಲು ಕ್ಷೇತ್ರದಲ್ಲಿ ತನ್ನ ಗೆಲುವಿಗಾಗಿ ಶ್ರಮಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಜಿಲ್ಲೆಯಲ್ಲಿ ಸ್ಪರ್ಧೆಗೆ ಟಿಕೆಟ್ ಪಡೆಯುವ ಸಂದರ್ಭ ಇಲ್ಲಿ ಟಿಕೆಟ್ ಪಡೆಯುವುದು ವ್ಯರ್ಥ ಎಂಬ ಮಾತು ಕೇಳಿ ಬಂದಿತ್ತು. ಮತದಾರರನ್ನು ಸಂಪರ್ಕಿಸಲು ಸಿಕ್ಕಿದ ಕೆಲವೇ ದಿನಗಳಲ್ಲಿ ಕೆಲ ಕ್ಷೇತ್ರಗಳಿಗೆ ಕೆಲ ಗಂಟೆಯ ಸಮಯವನ್ನೂ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಪಕ್ಷದ ನಾಯಕರು, ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಹಿಂದಿನ ಅಭ್ಯರ್ಥಿಗಿಂತ ಹೆಚ್ಚಿನ ಮತಗಳನ್ನು ಪಡೆದ ಬಗ್ಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ನಾನು ಸೋತಿರಬಹುದು, ಆದರೆ ಪಕ್ಷದ ಕಾರ್ಯಕರ್ತರು ನನಗೆ ನೀಡಿದ ಬೆಂಬಲವನ್ನ ಮರೆಯುವಂತಿಲ್ಲ. ನಿನ್ನೆ ರಾಷ್ಟ್ರೀಯ ನಾಯಕರು ಕರೆ ಮಾಡಿ ಶ್ಲಾಘಿಸಿ, ನನ್ನ ಸ್ಪರ್ಧೆ ಬಗ್ಗೆ ಯೂ ಫೈಟ್ ಲೈಕ್ ಎ ಲಯನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಯಕರು ಹಾಗೂ ಕಾರ್ಯಕರ್ತರ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲೂ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದರು.
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಸಾಧನೆ ಉತ್ತಮವಾಗಿದೆ. ಅಯೋದ್ಯೆ.. ಅಯೋಧ್ಯೆ.. ಅಂತಾ ಇದ್ದ ಬಿಜೆಪಿಯನ್ನ ಜನ, ಅಯೋಧ್ಯೆಯಲ್ಲೇ ಸೋಲಿಸಿದ್ದಾರೆ. ಆದರೆ ಕರಾವಳಿಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಈ ಬಗ್ಗೆ ಆಲೋಚನೆ ಮಾಡಬೇಕಾಗಿದೆ ಎಂದು ಪದ್ಮರಾಜ್ ಹೇಳಿದರು.
ಸೋಲಿನ ಕಾರಣದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪದ್ಮರಾಜ್, ಸೋಲಿನ ನೈತಿಕ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಆದರೆ ಅದಕ್ಕಾಗಿ ಸುಮ್ಮನಾಗುವುದಿಲ್ಲ. ಪಕ್ಷ ಸಂಘಟನೆಯನ್ನು ಬಲಗೊಳಿಸುವ ಕಾರ್ಯ ಮಾಡುವುದಾಗಿ ಹೇಳಿದರು.
ಯಾವ ರೀತಿಯಲ್ಲಿ ಮನೆಯ ಪ್ರತೀ ಸದಸ್ಯನನ್ನು ಸಂಘಟನಾತ್ಮಕವಾಗಿ ತಲುಪಲು ಸಾಧ್ಯ ಎಂಬುದನ್ನು ಬಿಜೆಪಿಯ ಪಕ್ಷ ಸಂಘಟನೆ ನೋಡಬೇಕು, ಒಳ್ಳೆಯದನ್ನ ಅನುಸರಿಸುವುದರಲ್ಲಿ ತಪ್ಪಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ಗೆ ಎಸ್ಡಿಪಿಐ ಬಾಹ್ಯವಾಗಿ ಬೆಂಬಲ ನೀಡಿದ ಕಾರಣ ಬಿಜೆಪಿ ಗೆಲುವಿನ ಅಂತರ ಕಡಿಮೆಯಾಗಿದೆ ಎಂಬ ಮಾತುಗಳಿವೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಎಸ್ಡಿಪಿಐಯವರು ಅಸ್ಪೃಶ್ಯರಲ್ಲ. ಈ ಹಿಂದೆ ಪಂಚಾಯತ್ನಲ್ಲಿ ಮೈತ್ರಿ ಮಾಡಿಕೊಂಡು ಅಧ್ಯಕ್ಷರಾಗಿರುವುದು ನಮ್ಮ ಎದುರೇ ಇದೆ ಎಂದರು.
ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಶುಭೋದಯ ಆಳ್ವ, ಅಶ್ರಫ್, ಲ್ಯಾನ್ಸಿ ಲೋಟ್ ಪಿಂಟೋ, ಸಂಶುದ್ದೀನ್, ಅಬ್ದುಲ್ ಲತೀಫ್, ಅಬ್ದುಲ್ ಖಾದರ್, ಅಬ್ದುಲ್ ರವೂಫ್, ಸುಹಾನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.