Manjeswara: ತೂಮಿನಾಡು ಜಂಕ್ಷನ್ಗೆ ಮಂಜೂರಾದ ಕಾಲು ಸೇತುವೆಯನ್ನು ಬೇರೆಡೆ ಸ್ಥಳಾಂತರಿಸಲು ಹುನ್ನಾರ-ನಾಗರಿಕ ವಲಯದಲ್ಲಿ ವ್ಯಾಪಕ ಆಕ್ರೋಶ: ಪ್ರತಿಭಟನೆಗೆ ಸಿದ್ಧತೆ
ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ವಶದಲ್ಲಿರುವ ಸೌಲಭ್ಯಗಳಿಂದ ಕೂಡಿದ ತೂಮಿನಾಡು ಜಂಕ್ಷನಿನಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಸ್ಥಳ ಗುರುತಿಸುವಿಕೆ ನಡೆದು ಮಂಜೂರಾದ ಕಾಲು ಸೇತುವೆಯನ್ನು ಖಾಸಗಿ ವ್ಯಕ್ತಿಗಳ ಹಿತಾಸಕ್ತಿಗಾಗಿ ಬೇರೆಡೆ ಸ್ಥಳಾಂತರಿಸಲು ರಾತ್ರೋರಾತ್ರಿ ಹುನ್ನಾರ ನಡೆಸಿದ ಉದ್ದೇಶ ಹಾಗೂ ಇದರ ಹಿಂದೆ ಕಾರ್ಯಾಚರಿಸಿದ ಕೆಲವೊಂದು ಕಾಣದ ಕೈಗಳ ನಡೆ ಹಲವು ಶಂಕೆಗೆ ಕಾರಣವಾಗಿರುವುದಾಗಿ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಅಕ್ರಮ ಕಾರ್ಯದಿಂದ ಉದ್ರಿಕ್ತಗೊಂಡ ಜನರು ಅಧಿಕಾರಿಗಳ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಹಾಗೂ ತಕ್ಷಣ ಈ ಸ್ಥಳಾಂತರವನ್ನು ತಡೆಗಟ್ಟುವಂತೆ ಒತ್ತಾಯಿಸಿದ್ದಾರೆ.
ಶಾಸಕರ ಸಮ್ಮುಖದಲ್ಲಿ ಈ ಮೊದಲು ಸ್ಥಳ ಗುರುತಿಸುವಿಕೆ ನಡೆದಿರುವ ಹಿನ್ನೆಲೆಯಲ್ಲಿ ಶಾಸಕರು ಕೂಡಲೇ ಮಧ್ಯ ಪ್ರದೇಶಿಸಿ ಸ್ಥಳಾಂತರವನ್ನು ತಡೆಗಟ್ಟಿ ಮೊದಲು ಸ್ಥಳ ಗುರುತಿಸುವಿಕೆ ನಡೆದ ಅದೇ ಸ್ಥಳದಲ್ಲೇ ಕಾಲು ಸೇತುವೆ ನಿರ್ಮಿಸಿಕೊಡುವಂತೆ ವಿವಿಧ ರಾಜಕೀಯ ಪಕ್ಷಗಳ ನೇತಾರರು ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಳೀಯರೊಂದಿಗೆ ಸೇರಿ ಪ್ರತಿಘಟನೆಯನ್ನು ನಡೆಸಲಿರುವುದಾಗಿಯೂ ಎಚ್ಚರಿಸಲಾಗಿದೆ.
ಈಗಾಗಲೇ ನಿಗದಿ ಪಡಿಸಿರುವ ಸ್ಥಳದಲ್ಲಿ ಬಸ್ಸು ನಿಲ್ದಾಣ, ಆಟೋ ರಿಕ್ಷಾ ನಿಲ್ದಾಣ ಸೇರಿದಂತೆ ಸಾರ್ವಜನಿಕರಿಗೆ ಸಕಲ ಸೌಕರ್ಯವಿರುವ ಸ್ಥಳವನ್ನು ಕೇವಲ ಒಬ್ಬ ಖಾಸಗಿ ವ್ಯಕ್ತಿಯ ಹಣದ ಬಲದಿಂದ ಸ್ಥಳವನ್ನು ಬದಲಾಯಿಸಿದರೆ ಅದನ್ನು ಯಾವುದೇ ಬೆಲೆ ತೆತ್ತು ಎದುರಿಸಲು ಸಿದ್ದರಿರುವುದಾಗಿ ಇಲ್ಲಿಯ ನಾಗರಿಕರು ಹೇಳುತಿದ್ದಾರೆ.
ಅಧಿಕಾರಿಗಳ ಭಾಗದಿಂದ ಹಾಗೂ ಶಾಸಕರ ಭಾಗದಿಂದ ಸ್ಪಷ್ಟಣೆ ಹಾಗೂ ನ್ಯಾಯವನ್ನು ಇಲ್ಲಿಯ ಜನರು ನಿರೀಕ್ಷಿಸುತಿದ್ದಾರೆ.