
Moodubidire: ಆಳ್ವಾಸ್ನಲ್ಲಿ ‘ಆಳ್ವಸ್ ಸಾಂಪ್ರದಾಯಿಕ ದಿನ-2024’
ವಿದ್ಯಾರ್ಥಿಗಳಿಗೆ ಮನುಷ್ಯತ್ವದ ಗುಣವನ್ನು ಆಳ್ವಾಸ್ ಕಲಿಸುತ್ತಿದೆ: ಅರುಣ್ ಸಾಗರ್
ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಓರ್ವ ಉತ್ತಮ ಶಿಕ್ಷಕ, ಎಂಜಿನಿಯರ್ ಅಥವಾ ಕಲಾವಿದನಾಗಿ ರೂಪುಗೊಳ್ಳುವಂತೆ ಆಳ್ವಾಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿರುವುದಲ್ಲದೆ ಓರ್ವ ಮನುಷ್ಯನಿಗೆ ಮನುಷ್ಯತ್ವದ ಗುಣವನ್ನು ಕಲಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ಹೇಳಿದರು.
ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಕೃಷಿಸಿರಿ ವೇದಿಕೆಯಲ್ಲಿ ನಡೆದ ‘ಆಳ್ವಾಸ್ ಸಾಂಪ್ರದಾಯಿಕ ದಿನ-2024’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಪಾಸ್ ಫೈಲ್ ಅನ್ನುವುದು ಇರುವುದಿಲ್ಲ. ಬದುಕಿನ ಪ್ರತಿಕ್ಷಣ, ಪ್ರತಿದಿನ ಅವಕಾಶಗಳು ಸಿಗುತ್ತಿರುತ್ತದೆ ಅವುಗಳನ್ನು ಅನುಭವಿಸಬೇಕು. ಅನುಭವ ಅನ್ನುವುದನ್ನು ಅನುಭಾವವಾಗಿ ಮಾಡುವುದರ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.
ಮಗುವೆಂಬ ಮುಗ್ದತೆಯ ಭಾವ ನಿಮ್ಮಲ್ಲಿದ್ದರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನೀವೆಲ್ಲರೂ ಒಳ್ಳೆ ಪ್ರಪಂಚದಲ್ಲಿ ಬದುಕುತ್ತಿದ್ದೀರಿ. ಕಲೆ ಸಂಸ್ಕೃತಿ, ಸಂಗೀತ ಇವೆಲ್ಲವುಗಳ ಬಗ್ಗೆ ಗೌರವವನ್ನು ಹೊಂದಿರುವ ಆಳ್ವರು ನಿಮಗೆ ಸಾಧನೆ ಮಾಡಲು ಅವಕಾಶಗಳನ್ನು ನೀಡಿ ನಿಮ್ಮೆಲ್ಲರನ್ನು ಹೀರೋಗಳಾಗಿ ಮಾಡಲು ಹೊರಟಿದ್ದಾರೆ ಎಂದ ಅವರು ನೀವೆಲ್ಲರೂ ಒಳ್ಳೆ ಮುನುಷ್ಯರಾದಾಗ ಸಾಧಕರಾಗುತ್ತೀರಿ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು.
ನಿರ್ಮಾಪಕ ಇಂದ್ರಜಿತ್ ಲಂಕೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಯುವ ಸಮುದಾಯದಿಂದ ದೇಶದ ಭವಿಷ್ಯ ಅದ್ಭುತವಾಗಿರುತ್ತದೆ. ಶಿಕ್ಷಣ ಪ್ರತಿಯೊಬ್ಬರಿಗೂ ಬೇಕು ಆದರೆ ಮನೋರಂಜನೆ ಮಾಡುವ ಸಮಯದಲ್ಲಿ ಮನೋರಂಜನೆ ಮಾಡಿ ಎಂದು ಸಲಹೆ ನೀಡಿದರು.
ತೀರ್ಪುಗಾರರಾದ ಮೈಮ್ ರಾಮ್ ದಾಸ್, ಬಿಗ್ ಬಾಸ್ ರನ್ನರ್ ಅರವಿಂದ ಕೆ.ಪಿ., ಚೈತ್ರಾ ಶೆಟ್ಟಿ, ವಿಜೇತ ಪೂಜಾರಿ, ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ನಿತೇಶ್ ಮಾರ್ನಾಡ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.