ಮಕ್ಕಳ ಸುರಕ್ಷೆಗೆ ಸದೃಢ ಕಾನೂನು: ಭವಿಷ್ ಕುಂದರ್

ಮಕ್ಕಳ ಸುರಕ್ಷೆಗೆ ಸದೃಢ ಕಾನೂನು: ಭವಿಷ್ ಕುಂದರ್


ಕಲ್ಲಬೆಟ್ಟು: ಭಾರತೀಯ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿದ್ದು ಪ್ರತಿಯೊಬ್ಬ ಪ್ರಜೆಯೂ ಗೌರವಯುತವಾಗಿ ಬಾಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಅದರಲ್ಲಿಯೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ರಚನೆಯಾಗಿರುವ ಕಠಿಣ ಕಾನೂನುಗಳಿಂದ ಪೋಷಕರು ಮತ್ತು ಮಕ್ಕಳು ಸಹಜ ಬದುಕನ್ನು ನಡೆಸಲು ಸಹಕಾರಿಯಾಗಿದೆ. ದೇಶದ ಭವಿಷ್ಯವಾದ ಮಕ್ಕಳ ಸುರಕ್ಷತೆ ಸಮಾಜದ ಹೊಣೆಗಾರಿಕೆಯಾಗಿದೆ ಎಂದು ಕಾರ್ಕಳದ ನ್ಯಾಯವಾದಿಗಳಾದ ಭವಿಷ್ ಕುಂದರ್ ತಿಳಿಸಿದರು.

ಅವರು ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಮತ್ತು ರಾಷ್ಟೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ನಡೆದ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. 

15 ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದರೆ ಪೋಕ್ಸೋ ಕಾಯ್ದೆಯಡಿಯಲ್ಲಿ ಅಪರಾಧಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಸಾಧ್ಯವಿದೆ. ಶೋಷಣೆಗೆ ಒಳಗಾದ ಮಕ್ಕಳು ಭಯಮುಕ್ತರಾಗಿ ದೂರು ದಾಖಲಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ತಮಗಾದ ದೌರ್ಜನ್ಯದ ಬಗ್ಗೆ ಧೈರ್ಯವಾಗಿ ಹೆತ್ತವರ ಬಳಿ ಹೇಳಿಕೊಳ್ಳಬೇಕು. ಕಾನೂನಿನ ಮೊರೆ ಹೋಗಬೇಕು ಎಂದು ಅವರು ಕಾಯ್ದೆಯ ಸ್ವರೂಪವನ್ನು ಸವಿಸ್ತಾರವಾಗಿ ತಿಳಿಸುತ್ತ ಕಾನೂನು ಅರಿವು ಮೂಡಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಕಾನೂನು ಎಲ್ಲರಿಗೂ ಸಮಾನವಾಗಿದೆ. ಬಾಲ್ಯವೆಂಬುದು ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ. ಇಲ್ಲಿ ಅನುಭವಿಸುವ ಮಾನಸಿಕ ಕಿರುಕುಳ ಭವಿಷ್ಯವನ್ನೇ ಹಾಳು ಮಾಡುತ್ತದೆ. ಕಾನೂನಿನ ನೆರವು ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಮಾತನಾಡಿ, ಮಕ್ಕಳ ಕುರಿತಾಗಿನ ಕಾನೂನನ್ನು ನೀವು ತಿಳಿದುಕೊಂಡು ಇನ್ನೊಬ್ಬರಿಗೂ ತಿಳಿಸುವ ಮೂಲಕ ಕಾನೂನು ಅರಿವು ಕಾರ್ಯಕ್ರಮ ಸಾರ್ಥಕವಾಗಬೇಕು. ಸುಶಿಕ್ಷಿತ ಸಮಾಜ ರೂಪುಗೊಳ್ಳಬೇಕು ಎಂದು ತಿಳಿಸಿದರು.

ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವೀ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚಂದ್ರಶೇಖರ್ ಸ್ವಾಗತಿಸಿದರು. ಅಭಿನವ್ ಅತಿಥಿ ಪರಿಚಯ ಮಾಡಿದರು. ಅಪೇಕ್ಷಾ ನಿರೂಪಿಸಿ, ಸಮೀಕ್ಷಾ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article