Mangalore: ಬಡಾವಣೆ ಅನುಮೋದನೆ ಅಧಿಕಾರ ಗ್ರಾಪಂಗೆ ವಾಪಸ್ ನೀಡಲು ಡಾ. ಮಂಜುನಾಥ ಭಂಡಾರಿ ಆಗ್ರಹ
Tuesday, July 16, 2024
ಮಂಗಳೂರು: ಇತ್ತೀಚಿಗೆ ಸರಕಾರ ನೀಡಿರುವ ಆದೇಶದಂತೆ ಗ್ರಾಮ ಪಂಚಾಯತ್ಗಳು ಬಡಾವಣೆ ಅನುಮೋದನೆ ನೀಡುವ ಅಧಿಕಾರವನ್ನು ಹಿಂಪಡೆಯಲಾಗಿದ್ದು, ದ.ಕ. ಜಿಲ್ಲೆಯಲ್ಲಿ ಈ ಸ್ವತ್ತು ನಮೂನೆ 9 ಮತ್ತು 11 ಪಡೆಯುವಲ್ಲಿ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಸೋಮವಾರ ಶೂನ್ಯ ವೇಳೆಯಲ್ಲಿ ಸರಕಾರದ ಗಮನ ಸೆಳೆದ ಅವರು ಜನಸಾಮಾನ್ಯರು ಈ ಸ್ವತ್ತು ನಮೂನೆ 9 ಮತ್ತು 11 ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ .ಈ ಹಿಂದೆ ಇದ್ದಂತೆ ಬಡಾವಣೆ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತ್ಗಳಿಗೆ ವಾಪಸ್ ನೀಡಬೇಕು. ಸಮಸ್ಯೆ ಬಗೆಹರಿ ಸಲು ಗ್ರಾಮೀಣಾಭಿವೃದ್ಧಿ, ಕಂದಾಯ ಹಾಗೂ ನಗರಾಭಿವೃದ್ಧಿ ಇಲಾಖಾ ಸಚಿವರ ಸಭೆಯನ್ನು ಕೂಡಲೇ ಆಯೋಜಿಸು ವಂತೆ ಅವರು ಆಗ್ರಹಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತೆರೆಯಬೇಕೆಂಬುದು ಅಲ್ಲಿನ ಜನರ ಬೇಡಿಕೆಯಾಗಿ ರುತ್ತದೆ. ಸರಕಾರವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಉಡುಪಿ ಜಿಲ್ಲೆಯ ಕುಂದಾಪುರ ಅಥವಾ ಬೈಂದೂರಿನಲ್ಲಿ ವೈದ್ಯಕೀಯ ಕಾಲೇಜು ತೆರೆಯಬೇಕೆಂದು ಸರಕಾರಕ್ಕೆ ಮಂಜುನಾಥ ಭಂಡಾರಿ ಮನವಿ ಮಾಡಿದರು.