Moodubidire: ಆ.15: ಮಾಜಿ ಸೈನಿಕರ ದಶಮಾನೋತ್ಸವ-ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು

Moodubidire: ಆ.15: ಮಾಜಿ ಸೈನಿಕರ ದಶಮಾನೋತ್ಸವ-ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು


ಮೂಡುಬಿದಿರೆ: ಮಾಜಿ ಸೈನಿಕರ ವೇದಿಕೆ ಮೂಡುಬಿದಿರೆ-ಕಾರ್ಕಳ ಇದರ ದಶಮಾನೋತ್ಸವ ಸಮಾರಂಭವು ಆ.15 ರಂದು ಇಲ್ಲಿನ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ವಿಜಯ್ ಫೆರ್ನಾಂಡಿಸ್ ಹೇಳಿದರು.

ಅವರು ಸೋಮವಾರ ಮೂಡುಬಿದಿರೆ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕಳೆದ ಹತ್ತು ವರ್ಷದ ಹಿಂದೆ 15 ಮಾಜಿ ಸೈನಿಕರನ್ನು ಒಳಗೊಂಡು ಆರಂಭವಾದ ವೇದಿಕೆಯಲ್ಲಿ ಪ್ರಸ್ತುತ ಸುಮಾರು 1000ಕ್ಕು ಅಧಿಕ ಮಂದಿ ಸದಸ್ಯರಿದ್ದಾರೆ. ಈ ಅವಧಿಯಲ್ಲಿ ಕಾರ್ಕಳ ಮತ್ತು ಮೂಡುಬಿದಿರೆಯ ಅನೇಕ ಶಾಲೆ, ಸಂಘ, ಸಂಸ್ಥೆಗಳಲ್ಲಿ ಮಾಜಿ ಸೈನಿಕರ ವೇದಿಕೆ ವತಿಯಿಂದ ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಆಚರಣೆ, ಕಾರ್ಗಿಲ್ ದಿವಸ್, ಬಾಂಗ್ಲಾ ದೇಶ್ ವಿಮೋಚನೆ ದಿವಸ್‌ನಂತಹ ಅನೇಕ ದೇಶ ಭಕ್ತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಿದ್ದೇವೆ. ಸೈನ್ಯಕ್ಕೆ ಸೇರ ಬಯಸುವ ಮಕ್ಕಳಿಗೆ ವೇದಿಕೆ ವತಿಯಿಂದ ಶಿಬಿರಗಳನ್ನು ಹಮ್ಮಿಕೊಂಡು ಅಗ್ನಿವೀರ್ ಯೋಜನೆ ಸಹಿತ ವಿವಿಧ ವಿಭಾಗದ ಸೇನೆಗೆ ಸೇರ ಬಯಸಲು ಅಗತ್ಯ ಇರುವ ಮಾಹಿತಿಗಳನ್ನು ನೀಡಲಾಗಿದೆ.  

ಮೂಡುಬಿದಿರೆಯಲ್ಲಿ ದಶಮಾನೋತ್ಸವ ಪ್ರಯುಕ್ತ ಮೂಡುಬಿದಿರೆ ಹಾಗು ಕಾರ್ಕಳ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೂಡುಬಿದಿರೆಯಲ್ಲಿ `ಯದ್ಧ ಸ್ಮಾರಕ' ನಿರ್ಮಾಣಕ್ಕೆ ಚಿಂತನೆ ನಡೆಸುತ್ತಿದ್ದೇವೆ ಎಂದರು.

ಇದೇ 15ಕ್ಕೆ ಸಂಜೆ 5ಗಂಟೆಗೆ ನಡೆಯುವ ದಶಮಾನೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಹಾಗೂ ಮಾಜಿ ಸೈನಿಕರ ವೇದಿಕೆಯ ಗೌರವ ಅಧ್ಯಕ್ಷ  ಡಾ. ಎಂ. ಮೋಹನ ಅಳ್ವ ವಹಿಸಲಿದ್ದಾರೆ. ಸಂಸದ ಸದಸ್ಯ ಕ್ಯಾ. ಬೃಜೇಶ್ ಚೌಟ, ಶಾಸಕರಾದ ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ, ಉದ್ಯಮಿ ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಎರಡನೇ ಮಹಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಇಲ್ಲಿನ ನಾಲ್ವರು ಮಾಜಿ ಸೈನಿಕರನ್ನು ಸನ್ಮಾನಿಸಲಾಗುವುದು. ಸಂಜೆ 6 ಗಂಟೆಯಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ಹಾಗೂ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 

ಸುದ್ದಿಗೋಷ್ಠಿಯಲ್ಲಿ ಸಮಿತಿ ಕರ‍್ಯದರ್ಶಿ ಭಾಸ್ಕರ್, ಪ್ರಮುಖರಾದ ವಾಸುದೇವ ಶೇರಿಗಾರ್, ರಾಮಕೃಷ್ಣ ಶೆಣೈ ಹಾಗೂ ಕ್ಯಾ.ಸುರೆಶ್ ಶೆಟ್ಟಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article