Udupi: ಬಿಎಸ್ಎನ್ಎಲ್ ಸಮಸ್ಯೆ ಬಗೆಹರಿಸಲು ಕೋಟ ಶ್ರೀನಿವಾಸ ಪೂಜಾರಿ ಸೂಚನೆ
Tuesday, July 16, 2024
ಉಡುಪಿ: ಜಿಲ್ಲೆಯ ಗ್ರಾಮೀಣ ಭಾಗದ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು ಮತ್ತು ಕಡಿಯಾಳಿಯಲ್ಲಿ ಖಾಲಿ ಇರುವ ಬಿಎಸ್ಎನ್ಎಲ್ ಕಟ್ಟಡವನ್ನು ಕೌಶಲ ಕೇಂದ್ರವಾಗಿ ಪರಿವರ್ತಿ ಸಲು ಯೋಚಿಸುವಂತೆ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಎಸ್ಎನ್ಎಲ್ ಅಧಿಕಾರಿಗಳ ಸಭೆ ನಡೆಸಿ, 196 ಟವರ್ಗಳು ಕಾರ್ಯನಿರ್ವಹಿಸುತ್ತಿದ್ದರೂ ಅನೇಕ ಕಡೆಗಳಲ್ಲಿ ಸಮಸ್ಯೆಯಿದೆ. ಗ್ರಾಹಕರಿಗೆ 4ಜಿ, 5ಜಿ ಸೇವೆಯನ್ನು ಆದಷ್ಟು ಬೇಗ ನೀಡುವ ನಿಟ್ಟಿನಲ್ಲಿ ಯೋಚಿಸಬೇಕು ಎಂದರು.
ಜಿಲ್ಲೆಯ ವಂಡ್ಸೆ, ಕೊಡ್ಲಾಡಿ, ಕೆರಾಡಿ ಹಾಗೂ ಯಳಜಿತ್ನಲ್ಲಿ ತಹಶೀಲ್ದಾರ್ ಮೂಲಕ ನಿವೇಶನ ಪಡೆದು ಟವರ್ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಸಿದ್ದಾಪುರ ಹಾಗೂ ನಾಡ್ಪಾಲ್ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಂಡು ಟವರ್ ನಿರ್ಮಾಣ ಮಾಡಬೇಕು. ನಿರ್ಮಾಣ ಹಂತದಲ್ಲಿರುವ 41 ಟವರ್ಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂಬ ಸೂಚನೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಟವರ್ ನಿರ್ವಹಣೆಗೆ ಸಿಬಂದಿ ಕೊರತೆ ಇರುವುದರಿಂದ ಗ್ರಾ.ಪಂ. ಮೂಲಕ ಟವರ್ ನಿರ್ವಹಣೆ ಯೋಚನೆ ನಡೆಸ ಬಹುದು ಎಂಬ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹಾಗೂ ಬಿಎಸ್ಎನ್ಎಲ್ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.