ಸಸ್ಯ ಸಂರಕ್ಷಣೆಯ ಹೊಣೆಗಾರಿಕೆಗೆ ಕಟಿಬದ್ಧರಾಗೋಣ: ಸದಾನಂದ ಬಿ. ಮುಂಡಾಜೆ
ಉಜಿರೆ: ಗಿಡಗಳನ್ನು ಸಂರಕ್ಷಿಸುವ ಹೊಣೆಗಾರಿಕೆಗೆ ನಾವೆಲ್ಲರೂ ಕಟಿಬದ್ಧರಾಗಬೇಕು ಎಂದು ನಾಟಿ ವೈದ್ಯ ಪರಿಣತ, ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮಾಜಿ ಸಿಬ್ಬಂದಿ ಸದಾನಂದ ಬಿ. ಮುಂಡಾಜೆ ಹೇಳಿದರು.
ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಸಸ್ಯಸೌರಭ ಸಂಘ ಮತ್ತು ಇಕೋ ಕ್ಲಬ್ ಜು.19 ರಂದು ಆಯೋಜಿಸಿದ್ದ ಸಾಂಪ್ರದಾಯಿಕ ಔಷಧ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತನ್ನ ಬೇರುಗಳ ಮೂಲಕ ನೀರನ್ನು ಹೀರಿಕೊಂಡು ಹೂ ಹಣ್ಣು ಇವನ್ನೆಲ್ಲ ನೀಡುವ ಯಾವುದೇ ಗಿಡ ಮರ ಬಳ್ಳಿಗಳು ಪ್ರಪಂಚದಲ್ಲಿ ಶ್ರೇಷ್ಠವಾದದ್ದು. ಹಲವಾರು ರೋಗಗಳನ್ನು ನಿವಾರಿಸುವಲ್ಲಿ ಸಸ್ಯಗಳ ಪಾತ್ರ ಬಹಳ ಮುಖ್ಯವಾದಂತದ್ದು. ಅಂತಹ ಗಿಡ ಮರಗಳನ್ನು ಉಳಿಸುವ ಉತ್ಸಾಹ ಅಗತ್ಯ ಎಂದು ಅವರು ಹೇಳಿದರು.
ಒಂದು ರೋಗ ಬರಲು ಮನಸ್ಸು ಕಾರಣ. ಆ ರೋಗ ಗುಣವಾಗಲು ಕೂಡ ಮನಸ್ಸೇ ಕಾರಣ. ಹೀಗಾಗಿ ಔಷಧ ಕೊಡುವವನು ಮತ್ತು ತೆಗೆದುಕೊಳ್ಳುವವನ ಮಧ್ಯೆ ನಂಬಿಕೆ ಇದ್ದಾಗ ಮಾತ್ರ ಔಷಧ ಫಲಿಸುತ್ತದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಅವರು, ಪ್ರಕೃತಿಯಲ್ಲಿರುವ ಯಾವುದೇ ಗಿಡಗಳಲ್ಲಿ ಒಂದಲ್ಲ ಒಂದು ಔಷಧೀಯ ಗುಣ ಇದ್ದೇ ಇರುತ್ತದೆ. ಸಸ್ಯಗಳನ್ನು ಪ್ರೀತಿಸಿ, ಅವುಗಳೊಂದಿಗೆ ಮಾತನಾಡಿ. ಅವುಗಳು ಸ್ಪಂದಿಸುವ ಗುಣ ಹೊಂದಿವೆ ಎಂದರು.
ಈ ಸಂದರ್ಭದಲ್ಲಿ ವಿಭಾಗದ ಭಿತ್ತಿಪತ್ರಿಕೆ ‘ಸಸ್ಯಸೌರಭ’ದ ‘ಹರ್ಬಲ್ಸ್ ದ್ಯಾಟ್ ಹೀಲ್’ ಸಂಚಿಕೆ ಅನಾವರಣಗೊಳಿಸಲಾಯಿತು.
ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಪ್ರಥಮ್ ಪ್ರಾರ್ಥಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿಗಳಾದ ನಯನ ಕೆ. ಸ್ವಾಗತಿಸಿ, ಲಾವಣ್ಯ ವಂದಿಸಿ, ವೈದೇಹಿ ನಿರೂಪಿಸಿದರು.


