ರಾಜ್ಯಪಾಲರ ವಿರುದ್ಧ ಐವನ್ ಡಿ'ಸೋಜ ಪ್ರಚೋಧನಕಾರಿ ಹೇಳಿಕೆ: ಹಿಂಜಾವೇ ದೂರು
ಮೂಡುಬಿದಿರೆ: ಮೂಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ತನಿಖೆಗೆ ಮತ್ತು ವಿಚಾರಣೆಗೆ ಅನುಮತಿ ನೀಡಿರುವ ರಾಜ್ಯಾಪಾಲರ ಆದೇಶದ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನಾ ಸಭೆಯಲ್ಲಿ ರಾಜ್ಯಪಾಲರ ವಿರುದ್ಧ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಚೋದನಕಾರಿ ಮಾತುಗಳ ಮೂಲಕ ಹೇಳಿಕೆ ನೀಡಿರುವುದನ್ನು ಹಿಂದು ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ಪ್ರಬಲವಾಗಿ ಖಂಡಿಸಿ ಮೂಡುಬಿದಿರೆ ಪೊಲೀಸರಿಗೆ ಮಂಗಳವಾರ ದೂರು ನೀಡಿದೆ.
ಒಂದು ವೇಳೆ ರಾಷ್ಟ್ರಪತಿಯವರು ರಾಜ್ಯಪಾಲರನ್ನು ಹಿಂದಕ್ಕೆ ಕರೆಸದೇ ಇದ್ದಲ್ಲಿ ಬಾಂಗ್ಲಾದೇಶದಲ್ಲಿ ಅಲ್ಲಿನ ಅಧ್ಯಕ್ಷರು ರಾತ್ರೋರಾತ್ರಿ ಓಡಿ ಹೋದರಲ್ಲ ಅದೇ ಪರಿಸ್ಥಿತಿ ಗವರ್ನರ್ ಅವರಿಗೂ ಬರುತ್ತದೆ. ನಮ್ಮ ಮುಂದಿನ ಹೋರಾಟ ಗವರ್ನರ್ ಆಫೀಸ್ ಚಲೋ ಎಂಬುದಾಗಿ ಐವನ್ ಡಿ'ಸೋಜ ಹೇಳಿಕೆ ನೀಡಿರುವುದನ್ನು ಸಂಘಟನೆ ವಿರೋಧಿಸಿದೆ.
ಜನರು ಬಾಂಗ್ಲಾ ದೇಶದಲ್ಲಿ ರಾಷ್ಟ್ರಾಧ್ಯಕ್ಷರ ಭವನಕ್ಕೆ ನುಗ್ಗಿ ದಾಂಧಲೆ ಮಾಡಿದ ರೀತಿಯಲ್ಲಿ ರಾಜ್ಯಭವನಕ್ಕೂ ನುಗ್ಗಿ ದಾಂಧಲೆ ಮಾಡಿ ರಾಜ್ಯಪಾಲರು ಕೂಡ ರಾಜ್ಯಭವನ ಬಿಟ್ಟು ಓಡಿ ಹೋಗುವ ರೀತಿಯಲ್ಲಿ ಮಾಡುವಂತೆ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿರುತ್ತಾರೆ ಎಂದು ಅಪಾದಿಸಿದ್ದಾರೆ.
ಜನಪ್ರತಿನಿಧಿಯಾಗಿರುವ ಐವನ್ ಡಿಸೋಜಾ ಅವರು ಶಾಂತಿಭಂಗ ಉಂಟಾಗುವ ರೀತಿಯಲ್ಲಿ ಮತ್ತು ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ವಿರುದ್ಧ ಜನರನ್ನು ಎತ್ತಿಕಟ್ಟುವ ರೀತಿಯಲ್ಲಿ ಪ್ರಚೋದನಕಾರಿ ಮಾತನಾಡಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಿಂದು ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ.ಸಿ. ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಹಸಂಯೋಜಕ ಶರತ್ ಮಿಜಾರು, ತಾಲೂಕು ಪ್ರಮುಖರಾದ ಅನೋಜ್ ಭಂಡಾರಿ, ಸುನಿಲ್, ಸುಧಾಕರ ಹೆಗ್ಡೆ, ಸಂದೀಪ್ ಬನ್ನಡ್ಕ ಉಪಸ್ಥಿತರಿದ್ದರು.
