ವೈದ್ಯರಿಂದ ಮೌನ ಉಪವಾಸ ಸತ್ಯಾಗ್ರಹ
Wednesday, October 16, 2024
ಮಂಗಳೂರು: ಕೋಲ್ಕತ್ತಾದ ಆರ್ಜಿಕಾರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಸಂಭವಿಸಿ ತಿಂಗಳು ಕಳೆದರೂ ಪ್ರಕರಣಕ್ಕೆ ನ್ಯಾಯ ಸಿಗದಿರುವುದನ್ನು ಖಂಡಿಸಿ ಐಎಂಎ ಮಂಗಳೂರು ಘಟಕ, ಯುವ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ನಗರದ ಅತ್ತಾವರದಲ್ಲಿರುವ ಐಎಂಎ ಭವನದಲ್ಲಿ ಮಂಗಳವಾರ ಒಂದು ದಿನ ಮೌನ ಉಪವಾಸ ಸತ್ಯಾಗ್ರಹ ನಡೆಯಿತು.
ಐಎಂಎ ಭವನದಲ್ಲಿ ಸಾಂಕೇತಿಕವಾಗಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ನೂರಾರು ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದರು
ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ರಂಜನ್ ಆರ್.ಕೆ., ಕಾರ್ಯದರ್ಶಿ ಅವಿನ್ ಆಳ್ವ, ಮಾಜಿ ಅಧ್ಯಕ್ಷರಾದ ಡಾ.ವೇಣುಗೋಪಾಲ್, ಕೆ.ಆರ್.ಕಾಮತ್, ಡಾ.ಅಣ್ಣಯ್ಯ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
ಐಎಂಎ ಕೇಂದ್ರ ಸಂಘಟನೆಯು ದೇಶದಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ನೀಡಿರುವ ಕರೆಯನ್ವಯ ಮಂಗಳೂರು ಕಾರ್ಯಕ್ರಮ ಆಯೋಜಿಸಲಾಗಿದೆ.