ಯುವ ರೆಡ್ ಕ್ರಾಸ್ ಸೇವೆಯೊಂದಿಗೆ ಸಂಬಂಧ ಬೆಸೆಯುತ್ತದೆ: ಪ್ರೊ. ಪಿ.ಎಲ್. ಧರ್ಮ

ಯುವ ರೆಡ್ ಕ್ರಾಸ್ ಸೇವೆಯೊಂದಿಗೆ ಸಂಬಂಧ ಬೆಸೆಯುತ್ತದೆ: ಪ್ರೊ. ಪಿ.ಎಲ್. ಧರ್ಮ


ಮಂಗಳೂರು: ಯುವ ರೆಡ್‌ಕ್ರಾಸ್ ವ್ಯಕ್ತಿಗೆ ಸಹಾಯ ಮಾಡುವ ಮೂಲಕ ಸಮಾಜದೊಂದಿಗೆ ಸಂಬಂಧ ಕಲ್ಪಿಸುತ್ತದೆ. ರಕ್ತದಾನ ಮಾಡುವಾಗ ರಕ್ತ ಕೊಡುವುದು, ಪಡೆಯುವುದು ಮಾತ್ರವಲ್ಲದೇ ಇಡೀ ಜಗತ್ತನ್ನು ಬೆಸೆಯುತ್ತದೆ. ವಿವಿಧತೆ ಮೀರಿ ಸಂಬಂಧ ಹುಟ್ಟಿಸಬೇಕು. ಸೇವೆಯೊಂದಿಗೆ ಸಂಬಂಧ ಬೆಸೆಯುವಲ್ಲಿ ಯುವ ರೆಡ್‌ಕ್ರಾಸ್‌ ಯಶಸ್ವಿಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್‌ ಘಟಕ ಮತ್ತು ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಯೋಗದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಯುವ ರೆಡ್‌ಕ್ರಾಸ್‌ ಪ್ರಶಸ್ತಿ ಪ್ರದಾನ ಮತ್ತು ಕಾರ್ಯಕ್ರಮ ಅಧಿಕಾರಿಗಳಿಗೆ ಒಂದು ದಿನದ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ದೇಶಕ್ಕಾಗಿ ಪ್ರೀತಿ, ಕಾಳಜಿ ಜೊತೆಗೆ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶವಿದೆ. ಬೇರೆ ಬೇರೆ ಕಾರಣಗಳಿಂದ ಆ ಕೆಲಸ ಮಾಡಲು ತುಂಬಾ ಖುಷಿಯಾಗುತ್ತದೆ. ಪ್ರೀತಿಗಳಿಸಲು ಶಾಂತಿಯುತ ನಗುಸಾಕು, ಹಣದಿಂದ ನಗು ತರಿಸುವುದು ಸಾಧ್ಯವಿಲ್ಲ. ಸೇವೆಯೊಂದಿಗೆ ಮನುಷ್ಯತ್ವವೂ ಸೇರಬೇಕು ಎಂದು ಹೇಳಿದರು.

ಗಳಿಸಿದ ಪ್ರಶಸ್ತಿಗಳಿಗಿಂತ ವಿದ್ಯಾರ್ಥಿಗಳಲ್ಲಿ ಎಷ್ಟು ಸೇವಾ ಮನೋಭಾವನೆ ಬೆಳೆಸಲು ಸಾಧ್ಯವಾಯಿತು ಎಂಬುದು ಮುಖ್ಯ. ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಯುವ ರೆಡ್‌ಕ್ರಾಸ್‌ನಲ್ಲಿ ವಿಭಿನ್ನ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆಸುವಲ್ಲಿ ನಾವೆಲ್ಲರೂ ಸಹಕರಿಸೋಣ ಎಂದು ದ.ಕ. ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ಅಧ್ಯಕ್ಷ ಸಿ.ಎ. ಶಾಂತಾರಾಮ ಶೆಟ್ಟಿ ಹೇಳಿದರು.

ಬೆಸೆಂಟ್‌ ಮಹಿಳಾ ಕಾಲೇಜು ಮತ್ತು ರೋಶನಿ ನಿಲಯ ಉತ್ತಮ ಯುವ ರೆಡ್‌ಕ್ರಾಸ್‌ ಘಟಕ ಪ್ರಶಸ್ತಿಗೆ ಭಾಜನವಾಯಿತು. ಉತ್ತಮ ಕಾರ್ಯಕ್ರಮ ಅಧಿಕಾರಿ ಪ್ರಶಸ್ತಿಯನ್ನು ಬೆಸೆಂಟ್‌ ಮಹಿಳಾ ಕಾಲೇಜಿನ ಉಪನ್ಯಾಸಕಿ ದೀಕ್ಷಿತಾ ಹಾಗೂ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಉಪನ್ಯಾಸಕಿ ಆಶಿತಾ ಪಡೆದುಕೊಂಡರು. ಉತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಬೆಸೆಂಟ್‌ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಾದ ದೇವಿಶ್ರೀ ಆರ್‌. ರೈ ಮತ್ತು ಪ್ರಜ್ಞಾ, ರೋಶನಿ ನಿಲಯದ ವಿದ್ಯಾರ್ಥಿನಿ ಖತಿಜಾ ಮೆಹ್ತಾ, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ವಿದ್ಯಾರ್ಥಿ ಶಿವಾನಂದ, ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಡಿ.ಎಚ್‌. ಅಭಿಲಾಷ್‌ ಹಾಗೂ ತ್ರಿಶಾ ಕಾಲೇಜಿನ ವಿದ್ಯಾರ್ಥಿನಿ ಶಾನೆಲ್‌ ಡಿ'ಸೋಜಾ ಅವರು ಪಡೆದುಕೊಂಡರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಮಾತನಾಡಿ, ಮೂಲಭೂತ ಚಿಂತನೆಗಳನ್ನು ಇಟ್ಟುಕೊಂಡು ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸೇವೆ ನೀಡಬಹುದು ಎಂಬುದಕ್ಕೆ ಈ ವೇದಿಕೆ ಸಾಕ್ಷಿ ಎಂದು ಹೇಳಿದರು.

ಇದೇ ವೇಳೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್‌. ಧರ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯ ನಾಮನಿರ್ದೇಶನ ಸದಸ್ಯ ಬಿ. ನಿತ್ಯಾನಂದ ಶೆಟ್ಟಿ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ದ.ಕ. ಘಟಕದ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ, ಯುವ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಾಯತ್ರಿ ಎನ್‌. ಉಪಸ್ಥಿತರಿದ್ದರು. 


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article