
ಆಯೋಧ್ಯೆ ರಾಮಮಂದಿರ-ಪೂರ್ಣಗೊಳ್ಳಲು ಒಂದೂವರೆ ವರ್ಷ ಬೇಕು: ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ಜಿ
ಪುತ್ತೂರು: ಆಯೋಧ್ಯೆಯ ರಾಮಮಂದಿರ ಕೆಲಸ ಪೂರ್ಣಗೊಂಡಿಲ್ಲ. ಹಲವಾರು ಕಾಮಗಾರಿಗಳು ನಡೆಯಬೆಕಾಗಿದೆ. ಆಯೋಧ್ಯೆಯ ಈ ಕೆಲಸಗಳು ಸಂಪೂರ್ಣಗೊಳ್ಳಲು ಒಂದೂವರೆ ವರ್ಷ ಬೇಕು. ರಾಮಮಂದಿರದ ಆವರಣದಲ್ಲಿ 6 ದೇವಾಲಯಗಳು, ವಾಲ್ಮೀಕಿ, ವಶಿಷ್ಟ ಮುಂತಾದ ಸಂತರ ಮಂಟಪಗಳು, ಜಟಾಯು ಪುತ್ಥಳಿ ಮತ್ತಿತರ ಕಾಮಗಾರಿಗಳು ನಡೆಯಬೇಕಾಗಿದೆ ಎಂದು ಶ್ರೀರಾಮಮಂದಿರ ನಿರ್ಮಾಣದ ಉಸ್ತುವಾರಿ, ವಿಶ್ವಹಿಂದೂಪರಿಷತ್ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ಜಿ ಹೇಳಿದರು.
ವಿಶ್ವ ಹಿಂದೂ ಪರಿಷದ್ ಕರ್ನಾಟಕ, ವಿಶ್ವ ಹಿಂದೂ ಪರಿಷದ್ ಪುತ್ತೂರು ಕಟ್ಟಡ ನಿರ್ಮಾಣ ಸಮಿತಿ ವತಿಯಿಂದ ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಕಾರ್ಯಾಲಯಕ್ಕೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಶಾಖೆಗಳನ್ನು ಮಾಡಿದ ತಾಲೂಕು ಪುತ್ತೂರು. ಈ ಕಾರಣಕ್ಕೆ ಇಲ್ಲಿನ ಪ್ರತಿಯೊಂದು ಕೆಲಸವೂ ಅಚ್ಚುಕಟ್ಟಾಗಿ ನಡೆಯುತ್ತದೆ. ಪ್ರಸ್ತುತ ೪ ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾರ್ಯಾಲಯವೂ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ನಮ್ಮ ಸನಾತನ ಸಂಸ್ಕೃತಿ ಬೆಳೆಸುವ ಕೇಂದ್ರಗಳನ್ನು ಪ್ರತಿಷ್ಠೆ ಮಾಡಬೇಕಿರುವುದು ಅನಿವಾರ್ಯ. ಅಲ್ಲಿ ಹಿಂದೂ ಧರ್ಮದ ಪ್ರಗತಿಗೆ ಪೂರಕವಾದ ಕೆಲಸಗಳು ಆಗಬೇಕು. ಹೆಣ್ಣು ಮಕ್ಕಳಿಗೆ ಭರತನಾಟ್ಯದಂತೆ ಆತ್ಮರಕ್ಷಣೆ ಕಲೆಯನ್ನು ಕಲಿಸಬೇಕು ಎಂದು ಹೇಳಿದರು.
ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಸಹನೆ, ತಾಳ್ಮೆ ಹಿಂದೂ ಸಮಾಜದ ಗೌರವವೂ ಹೌದು, ದೌರ್ಬಲ್ಯವೂ ಹೌದು. ಇದರ ಕಾರ್ಯಕರ್ತರು ಯಾವತ್ತೂ ಸ್ಥಾನಮಾನ, ಗೌರವ ಅಪೇಕ್ಷಿಸಿಲ್ಲ. ಹಿಂದೂ ಧರ್ಮ ವಿರೋಧಿಗಳಿಗಿಂತ ಸ್ವಧರ್ಮೀಯರಿಂದಲೇ ಸವಾಲು ಎದುರಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಅಶೋಕ್ ರೈ ಶಕುಂತಳಾ ಶೆಟ್ಟಿ:
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ. ಶೆಟ್ಟಿ ವಿಶೇಷವಾಗಿ ಭಾಗವಹಿಸಿದರು. ಅವರನ್ನು ವೇದಿಕೆಯಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.
ವಿಶ್ವ ಹಿಂದೂ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘಚಾಲಕ್ ವಿನಯಚಂದ್ರ ಉಜಿರೆ, ವಿಹಿಂಪ ಪ್ರಖಂಡ ಅಧ್ಯಕ್ಷರಾಗಿದ್ದ ಹಿರಿಯ ನ್ಯಾಯವಾದಿ ಎನ್. ಸುಬ್ರಹ್ಮಣ್ಯ ಕೊಳತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘ ಪರಿವಾರದ ಪ್ರಮುಖರಾದ ನವೀನ್, ಸುಭಾಷ್, ಮಹಾಬಲೇಶ್ವರ ಹೆಗ್ಡೆ, ಶರಣ್ ಪಂಪುವೆಲ್, ಪುನೀತ್ ಅತ್ತಾವರ, ಪ್ರದೀಪ್ ಸಾರಿಪಲ್ಲ, ಅಚ್ಯುತ ನಾಯಕ್, ಪ್ರತಾಪಸಿಂಹ ನಾಯಕ್, ಭುಜಂಗ ಕುಲಾಲ್, ಗೋಪಾಲ್ ಕುತ್ತಾರು, ಸುಧೀಶ್ ರೋಹಿತ್, ದಕ್ಷ ರವೀಂದ್ರ, ಪ್ರಮುಖರಾದ ಜಿ.ಎಲ್. ಬಲರಾಮ ಆಚಾರ್ಯ, ಮುಳಿಯ ಕೇಶವ ಪ್ರಸಾದ್, ಅಪ್ಪಯ್ಯ ಮಣಿಯಾಣಿ, ಶೇಖರ ನಾರಾವಿ, ಶ್ರೀಕೃಷ್ಣ ಉಪಾಧ್ಯಾಯ, ಪಿ.ಜಿ. ಜಗನ್ನಿವಾಸ್ ರಾವ್, ಸಾಜ ರಾಧಾಕೃಷ್ಣ ಆಳ್ವ, ಜೀವಂಧರ್ ಜೈನ್, ಭರತ್ ಕುಮ್ಡೇಲು, ಜನಾರ್ದನ ಬೆಟ್ಟ, ಅರುಣ್ ಕುಮಾರ್ ಪುತ್ತಿಲ ಮೊದಲಾದವರು ಪಾಲ್ಗೊಂಡರು.
ಬಜರಂಗದಳ ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ವಿಶಾಖ್ ಸಸಿಹಿತ್ಲು ಪ್ರಾರ್ಥಿಸಿದರು. ವಿಹಿಂಪ ಪ್ರಾಂತ ಕಾರ್ಯದರ್ಶಿ ಹಾಗೂ ಕಾರ್ಯಾಲಯ ನಿರ್ಮಾಣ ಸಮಿತಿ ಅಧ್ಯಕ್ಷರಾದ ಯು. ಪೂವಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಹಿಂಪ ಪುತ್ತೂರು ಜಿಲ್ಲಾಧ್ಯಕ್ಷ ಹಾಗೂ ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಡಾ. ಕೃಷ್ಣಪ್ರಸನ್ನ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಂದಿಸಿದರು. ನಗರ ಪ್ರಖಂಡ ಅಧ್ಯಕ್ಷ ದಾಮೋದರ ಪಾಟಾಳಿ ಕಾರ್ಯಕ್ರಮ ನಿರ್ವಹಿಸಿದರು.