
ಪುತ್ತೂರು ಸೀಮಾಧಿಪತಿಗೆ ‘ಹರಕೆಚೀಟಿ’: ಜೀವನ ಹಾಳುಮಾಡಿದಾತನಿಗೆ ‘ಶಿಕ್ಷೆ’ಗಾಗಿ ಮೊರೆ
ಪುತ್ತೂರು: ಆಕೆ ಯಾರೋ ಗೊತ್ತಿಲ್ಲ. ಯಾವ ಧರ್ಮ ಅಂತಲೂ ಗೊತ್ತಿಲ್ಲ. ಆದರೆ ಆ ಹೆಣ್ಣುಮಗಳಿಗೆ ಅನ್ಯಾಯವಾಗಿದೆ. ಹಾಗಾಗಿ ಆಕೆಯ ತಂದೆ ಆಯ್ದುಕೊಂಡ ಮಾರ್ಗ ದೇವರಿಗೆ ಮೊರೆ ಇಡೋದು. ಪುತ್ತೂರು ಸೀಮೆಯ ಅಧಿಪತಿ ಮಹಾಲಿಂಗೇಶ್ವರನ ಹರಕೆ ಡಬ್ಬಿಗೆ ಆಕೆ ತನ್ನ ನೋವನ್ನು ‘ಹರಕೆಚೀಟಿ’ ಮೂಲಕ ಸಮರ್ಪಿಸಿದ್ದಾರೆ..!
ತಿಂಗಳಿಗೊಮ್ಮೆ ಪುತ್ತೂರು ಮಹಾಲಿಂಗೇಶ್ವರ ದೇವಳದ ಹರಕೆಡಬ್ಬಿಯ ಎಣಿಕೆ ನಡೆಯುತ್ತದೆ. ಮಂಗಳವಾರ ಎಣಿಕೆ ಸಂದರ್ಭ ಈ ವಿಶೇಷವಾದ ‘ಹರಕೆಚೀಟಿ’ ಪ್ರಕರಣ ಬೆಳಕಿಗೆ ಬಂದಿದೆ.
ಈ ಹರಕೆ ಚೀಟಿಯಲ್ಲಿ ‘ಸಮೀರ ಅನ್ನೋನು ನನ್ನ ಜೀವನ ಹಾಳು ಮಾಡಿದ್ದಾನೆ. ಇವತ್ತು ನಾನು ಮತ್ತು ನನ್ನ ಮಗಳು ಬೀದೀಲಿ ಇದ್ದೀವಿ. ನನ್ನ ಹಾಗೇ ಆತನ ಜೀವನ ಕೂಡಾ ಹಾಳಾಗಬೇಕು. ಆತನಿಗೆ ಮದುವೆಯಾಗಲು ಹುಡುಗಿ ಸಿಗಬಾರದು. ಓ ದೇವರೇ ಇದು ನನ್ನ ಪ್ರಾರ್ಥನೆ’ ಎಂದು ಬರೆಯಲಾಗಿದೆ.
ಪುತ್ತೂರಿನ ಮಹಾತೋಬಾರ ಮಹಾಲಿಂಗೇಶ್ವರ ಅಂದರೆ ಎಲ್ಲಾ ಧರ್ಮದವರಿಗೂ ‘ಅಧಿಪತಿ’ ಈ ಹರಕೆ ಚೀಟಿಯಲ್ಲಿ ತನ್ನ ನೋವನ್ನು ದೇವರ ಮುಂದೆ ಇಟ್ಟು ನ್ಯಾಯ ಬೇಡುವ ಜತೆಗೆ ನನ್ನಂತೆ ಆತನ ಬದುಕು ಕೂಡಾ ಹಾಳಾಗಬೇಕು ಎಂದು ಶಾಪ ಇಡಲಾಗಿದೆ. ಸಮೀರ್ ಎಂಬ ಹೆಸರು ಅನ್ಯಧರ್ಮೀಯ ಹೆಸರಾಗಿದ್ದು, ಈತನಿಂದ ನಮ್ಮ ಬದುಕು ಹಾಳಾಗಿದೆ ಎಂದು ಅಸಹಾಯಕ ಹೆಣ್ಣುಮಗಳ ತಂದೆ ದೇವರಿಗೆ ಮೊರೆ ಇಟ್ಟಿದ್ದಾರೆ.
ಸಮೀರ ಎಂಬಾತ ಈ ಹೆಣ್ಣುಮಗಳನ್ನು ಮದುವೆಯಾಗಿ ಬಳಿಕ ಬೀದಿಪಾಲಾಗುವಂತೆ ಮಾಡಿದ್ದಾನೆಯೋ ಅಥವಾ ಪ್ರೀತಿ ಹೆಸರಲ್ಲಿ ವಂಚನೆ ನಡೆಸಿದ್ದಾನೆಯೋ ಎಂಬ ವಿಚಾರ ಯಾರಿಗೂ ಗೊತ್ತಿಲ್ಲ. ಆದರೆ ಆತನಿಂದ ಆಕೆ ಬದುಕು ಹಾಳಾಗಿದೆ ಎಂಬುವುದು ಈ ಹರಕೆಚೀಟಿಯಿಂದ ಸ್ಪಷ್ಟವಾಗಿದೆ. ಸಮೀರ ಎಂಬಾತ ಮಾಡಿರುವ ಅನ್ಯಾಯವನ್ನು ಬಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದ ಈ ಅಸಹಾಯಕ ಹೆಣ್ಣುಮಗಳ ತಂದೆ ದೇವರ ಮೊರೆ ಹೋದ ಪ್ರಕರಣ ಬೆಳಕಿಗೆ ಬರುತ್ತಿರುವಂತೆ ವಿಎಚ್ಪಿ, ಭಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸಂಘಪರಿವಾರದ ಸಂಘಟನೆಗಳು ಅನ್ಯಾಯವಾದ ಮಹಿಳೆ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿವೆ. ದೇವರಿಗೆ ಹರಕೆಚೀಟಿ ಮೂಲಕ ಮೊರೆ ಇಟ್ಟ ಹೆಣ್ಣುಮಗಳ ತಂದೆ ಇದಕ್ಕೆ ಸ್ಪಂಧಿಸುತ್ತಾರೆಯೋ ಅಥವಾ ಆತನಿಗೆ ಮಹಾಲಿಂಗೇಶ್ವರ ನೀಡುವ ಶಿಕ್ಷೆಗಾಗಿ ಆಕೆ ಕಾಯುತ್ತಾರೆಯೋ ಎಂಬುವುದನ್ನು ಕಾಲವೇ ನಿರ್ಣಯ ಮಾಡಲಿದೆ.
ಪುತ್ತೂರು ಮಹಾಲಿಂಗೇಶ್ವರ ದೇವರ ಭಕ್ತರಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಹಾಗಾಗಿ ಸಮೀರ್ ಎಂಬಾತ ಮಗಳನ್ನು ಮದುವೆಯಾಗಿ ಬಳಿಕ ಮೋಸ ಮಾಡಿದ ಪರಿಣಾಮ ಆಕೆ ತಂದೆಯೂ ಇಲ್ಲಿ ಮೊರೆ ಇಡುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಆದರೆ ಈ ಘಟನೆಯಲ್ಲಿ ನೋವುಂಡ ಕುಟುಂಬ ಹಿಂದುವೋ ಅಥವಾ ಬೇರೆ ಧರ್ಮೀಯರೋ ಎಂದು ಯಾರಿಗೂ ತಿಳಿದಿಲ್ಲ.