ಪಂಚಮಿ ಪುರಸ್ಕಾರಕ್ಕೆ ಹಿರಿಯ ನಟ ಮಂಡ್ಯ ರಮೇಶ್ ಆಯ್ಕೆ
ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಹಯೋಗದೊಂದಿಗೆ ಪಂಚಮಿ ಟ್ರಸ್ಟ್ ಉಡುಪಿ ನೀಡುವ ಚೊಚ್ಚಲ ಪಂಚಮಿ ಪುರಸ್ಕಾರಕ್ಕೆ ಹಿರಿಯ ನಟ ಮಂಡ್ಯ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಪುರಸ್ಕಾರ ಒಂದು ಲಕ್ಷ ರೂ. ಗೌರವಧನ, ಪ್ರಶಸ್ತಿಪತ್ರ ಮತ್ತು ಪದಕ ಹಾಗೂ ಸನ್ಮಾನ ಒಳಗೊಂಡಿದೆ. ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್.ಪಿ. ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಟ, ನಿರ್ದೇಶಕ, ರಂಗಶಿಕ್ಷಕ, ರಂಗ ಸಂಘಟಕ ಹಾಗೂ ಕಿರುತೆರೆ ಚಲನಚಿತ್ರಗಳ ಹಿರಿಯ ಕಲಾವಿದ. ಮೈಸೂರಿನ ನಟನ ಸಂಸ್ಥೆ ಹಾಗೂ ರಂಗಶಾಲೆಯ ಸ್ಥಾಪಕ, ಹಿರಿಯ ರಂಗಕರ್ಮಿಯಾದ ಮಂಡ್ಯ ರಮೇಶ್, ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ಅಧ್ಯಯನ ಮತ್ತು ನೀನಾಸಂ ತಿರುಗಾಟದ ಮೊದಲ ಮೂರು ವರ್ಷಗಳ ಕಲಾವಿದರಾಗಿದ್ದಾರೆ. ಅನೇಕ ನಾಟಕಗಳನ್ನು ದಿಗ್ದರ್ಶಿಸಿದ್ದಾರೆ ಎಂದು ವಿವರಿಸಿದರು.
ರಜತ ಸಂಭ್ರಮದಲ್ಲಿರುವ ಪಂಚಮಿ ಟ್ರಸ್ಟ್ ಮೊದಲ ಬಾರಿಗೆ ಪಂಚಮಿ ಪುರಸ್ಕಾರ ನೀಡುತ್ತಿದೆ. ಗಾಂಧಿ ಆಸ್ಪತ್ರೆ ಮೂಲಕ ವಿವಿಧ ಸಾಮಾಜಿಕ, ಆರೋಗ್ಯ ಕಾರ್ಯಕ್ರಮಗಳಲ್ಲಿ ಟ್ರಸ್ಟ್ ತೊಡಗಿಕೊಂಡಿದೆ ಎಂದು ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಮತ್ತು ಪಂಚಮಿ ಟ್ರಸ್ಟ್ ಪ್ರವರ್ತಕ ಡಾ. ಹರಿಶ್ಚಂದ್ರ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಉಪಾಧ್ಯಕ್ಷರಾದ ನಾಗರಾಜ್ ಹೆಬ್ಬಾರ್ ಮತ್ತು ವಿಘ್ನೇಶ್ವರ ಅಡಿಗ, ಪುರಸ್ಕಾರ ಸಮಿತಿ ಸಂಯೋಜಕ ಜನಾರ್ದನ ಕೊಡವೂರು ಇದ್ದರು.