
ಭಜನೆಯಲ್ಲಿ ಗೊಂದಲಗಳಿಗೆ ಪರಿಹಾರ: ಶ್ರೀ ಗುರುದೇವಾನಂದ ಸ್ವಾಮೀಜಿ
ವಿಟ್ಲ: ರಾಮಾಯಣ ಮತ್ತು ಮಹಾಭಾರತ ನಮ್ಮ ಬದುಕು ಹೇಗಿರಬೇಕೆಂಬುದನ್ನು ತಿಳಿಸುತ್ತದೆ. ನಾವೆಲ್ಲ ಹುಟ್ಟುಹಬ್ಬವನ್ನು ಆಚರಿಸುತ್ತೇವೆ. ಆದರೆ ಆಚರಿಸುವ ಸಂದರ್ಭ ಸತ್ಕಾರ್ಯಗಳನ್ನು ಮಾಡುವುದು ಆದರ್ಶವಾಗಬಲ್ಲದು. ಇಂದು ನಾವು ಕಾಣುವ ಸಮಾಜದ ಗೊಂದಲಗಳಿಗೆ ಪರಿಹಾರ ಭಜನೆಯಲ್ಲಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಇತ್ತೀಚಿಗೆ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಸ್ಕೃತಿ ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಮಾಜದಲ್ಲಿ ಯಾವುದೂ ಅತಿಯಾಗಕೂಡದು. ಅತಿಯಾದುದಕ್ಕೆ ಇತಿ ಹಾಡಿದಾಗ ಜೀವನ ವಿಕಾಸ ಸಾಧ್ಯ ಎಂದು ಬಲಿಚಕ್ರವರ್ತಿಯ ಕಥೆಯನ್ನು ಉದಾಹರಿಸಿ ಸಲಹೆ ನೀಡಿದರು. ಧ್ಯಾನ-ಪ್ರಾಣಾಯಾಮ, ಶ್ರೀಮದ್ಭಗವದ್ಗೀತೆ ಹಾಗೂ ಹನುಮಾನ್ ಚಾಲೀಸಾ ಪಠಣ, ನಾಮ ಸಂಕೀರ್ತನೆ ನಡೆಯಿತು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಉಡುಪಿ ವಲಯಾಧ್ಯಕ್ಷ ಕೆ.ಪ್ರಭಾಕರ್ ಶೆಟ್ಟಿ, ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಉಡುಪಿ ಘಟಕದ ಸದಸ್ಯ ಜಿ.ಎನ್. ಕೋಟ್ಯಾನ್, ಕೃಷ್ಣ ಶೆಟ್ಟಿಗಾರ್, ಅಜೆಕ್ಕಾರು ಘಟಸಮಿತಿ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಕೇರ್ವಾಶೆ ಘಟಸಮಿತಿ ಕಾರ್ಯದರ್ಶಿ ಸುನೀತಾ ಉಪಸ್ಥಿತರಿದ್ದರು.
ಸೇವಾದೀಕ್ಷಿತೆ ರೂಪ ಸ್ವಾಗತಿಸಿದರು. ಸಂಯೋಜಕಿ ಚಂದ್ರಿಕಾ ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.