ಮಕ್ಕಳಿಗಾಗಿ ತುಳು ಡಿಜಿಟಲ್ ಸ್ವರೂಪ: ತಾರಾನಾಥ್ ಗಟ್ಟಿ ಕಾಪಿಕಾಡ್

ಮಕ್ಕಳಿಗಾಗಿ ತುಳು ಡಿಜಿಟಲ್ ಸ್ವರೂಪ: ತಾರಾನಾಥ್ ಗಟ್ಟಿ ಕಾಪಿಕಾಡ್

ಮಂಗಳೂರು: ಮಲ್ಲಿಕಟ್ಟೆ: ಮಕ್ಕಳಿಗಾಗಿ ತುಳುವನ್ನು ಡಿಜಿಟಲ್ ಸ್ವರೂಪಗಳಲ್ಲಿ ತಂದರೆ, ಇಂದಿನ ಮಕ್ಕಳಿಗೆ ಅದು ಬಹಳ ಆಪ್ತವಾಗುತ್ತದೆ ಮತ್ತು ಜಗದಗಲದ ಜನರಿಗೆ ತಲುಪುತ್ತದೆ. ಮಕ್ಕಳಿಗೆ ದೊಡ್ಡ ದೊಡ್ಡ ಗ್ರಂಥಗಳನ್ನು ನೀಡಿದರೆ ತುಳುವಿನ ಬಗೆಗೆ ಆಸಕ್ತಿ ಬರದು. ಮಕ್ಕಳಿಗೆ ಅವರ ವಯಸ್ಸಿಗೆ ಸಂಬಂಧಪಟ್ಟ ರೀತಿಯಲ್ಲಿ ಸಾಹಿತ್ಯವನ್ನು ನೀಡಿ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು.

ರಘು ಇಡ್ಕಿದು ರವರು ಸಾಹಿತ್ಯ ರಚಿಸಿ, ಸಂಗೀತ ನಿರ್ದೇಶಕ ಎಲ್ಲೂರು ಶ್ರೀನಿವಾಸರಾವ್ ಸಂಗೀತ ನೀಡಿದ, ವಿದ್ಯಾ.ಯು ನಿರ್ಮಾಣ, ನಿರ್ದೇಶನ, ಸಂಕಲನ ಮಾಡಿ, ಮಕ್ಕಳಿಂದಲೇ ಹಾಡುಗಳನ್ನು ಹಾಡಿಸಿ, ದೃಶ್ಶಿಕರಿಸಿದ ಈ ಮಕ್ಕಳ ತುಳು ಹಾಡುಗಳನ್ನು ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಸಭಾಭವನದಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಳುನಾಡಿನ ಗುಡ್ಡ, ಬೆಟ್ಟ, ನದಿ, ಬಯಲು, ಗದ್ದೆ, ತೋಡು, ತೋಟ ಇವುಗಳೆಲ್ಲ ದೊಡ್ಡವರ ಗಮನಕ್ಕೆ ಬಂದಿರುತ್ತದೆ. ಆದರೆ ಇಂದಿನ ಮಕ್ಕಳ ಗಮನಕ್ಕೆ ಬರಬೇಕಾದ ಅಗತ್ಯವಿದೆ. ಹಾಗಾಗಿ ಮಕ್ಕಳನ್ನು ಬಳಸಿಕೊಂಡು ಆ ದೃಶ್ಯಗಳನ್ನು ದೃಶ್ಶಿಕರಿಸಿ ಮಕ್ಕಳಿಗೆ ನೀಡಿದಾಗ ಆಪ್ತವಾಗುತ್ತದೆ. ಇದರಿಂದ ನಾಡಿನ ಬಗೆಗೆ ಭಾಷೆಯ ಬಗೆಗೆ ಮಕ್ಕಳಲ್ಲಿ ಕಿಂಚಿತ್ತಾದರೂ ಜಾದೃತಿ ಮೂಡುವ ಸಾಧ್ಯತೆ ಇದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಕವಿ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಮಾತನಾಡಿ, ತುಳುವಿನಲ್ಲಿ ಈ ರೀತಿಯ ಮಕ್ಕಳ ಹಾಡುಗಳು ಇದುವರೆಗೆ ಬಂದಿಲ್ಲ. ತುಳುವನ್ನು ಈ ರೀತಿ ಮಕ್ಕಳಿಗೆ ದಾಟಿಸಬೇಕಾದ ತುರ್ತು ಅಗತ್ಯ ಇಂದಿನ ದಿನಗಳಲ್ಲಿ ಇದೆ ಎಂದು ನುಡಿದರು.

ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಅವರು ಮಾತನಾಡಿ, ತುಳುವನ್ನು ಶಿಕ್ಷಣದ ಮೂಲಕ ಕಟ್ಟುವ ಅಗತ್ಯ ಇಂದು ಬಹಳ ಇದೆ ಎಂದರು.

ಸಂಗೀತ ನಿರ್ದೇಶಕರಾದ ಎಲ್ಲೂರು ಶ್ರೀನಿವಾಸ ರಾವ್ ಮತ್ತು ನಿರ್ಮಾಣ ನಿರ್ದೇಶನ ಮತ್ತು ಸಂಕಲನ ಮಾಡಿದ ವಿದ್ಯಾ.ಯು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಾಡುಗಳನ್ನು ಹಾಡಿದ ಮಕ್ಕಳು, ಹಾಡುಗಳಲ್ಲಿ ಅಭಿನಯಿಸಿದ ಮಕ್ಕಳು ಪಾಲ್ಗೊಂಡಿದ್ದರು.

ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು. ಥಂಡರ್ ಕಿಡ್ಸ್ ಮಂಗಳೂರು ಮತ್ತು ವಿದ್ಯಾ ಪ್ರಕಾಶನ ಕಾರ್ಯಕ್ರಮ ಆಯೋಜಿಸಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article