
ಹಿಂಜಾವೇ ಮುಖಂಡನ ವಿರುದ್ಧ ಪ್ರಕರಣ
ಕಾರ್ಕಳ: ಕಾರ್ಕಳದ ಲಕ್ಷ ದೀಪೋತ್ಸವದಲ್ಲಿ ಹಿಂದುಗಳಿಗೆ ಮಾತ್ರ ಅಂಗಡಿ ನಡೆಸಲು ಅವಕಾಶ ನೀಡುವ ವಿಚಾರದಲ್ಲಿ ಅಶಾಂತಿ ಸೃಷ್ಠಿಸುವ ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿರುವ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಶ್ರೀಕಾಂತ್ ಶೆಟ್ಟಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ನ.19ರಂದು ಮತ್ತು 20ರಂದು ಕಾರ್ಕಳದಲ್ಲಿ ನಡೆಯುವ ಲಕ್ಷ ದೀಪೋತ್ಸವದಲ್ಲಿ ಹಿಂದುಗಳಿಗೆ ಮಾತ್ರ ಅಂಗಡಿ ನಡೆಸಲು ಜಾಗ ಕೊಡಿ ಎಂದು ಕಾರ್ಕಳ ಪೇಟೆಯಲ್ಲಿನ ಅಂಗಡಿಯವರಲ್ಲಿ ಕಾರ್ಕಳದ ರಮೇಶ್ ಶೆಟ್ಟಿ ಮತ್ತು ಬಂಟ್ವಾಳ ಕಡೆಯ 2-3 ಮಂದಿ ನ.12ರಂದು ಹೇಳಿಕೊಂಡು ಸ್ಥಳೀಯವಾಗಿ ಪ್ರಚಾರ ಮಾಡಿದ್ದು, ಈ ಮೂಲಕ ಇವರು ಬೇರೆ ಬೇರೆ ಸಮುದಾಯಗಳ ಮಧ್ಯೆ ವೈರುತ್ವ, ಧ್ವೇಷ ಹಾಗೂ ವೈಮನಸ್ಸು ಭಾವನೆಗಳನ್ನು ಉಂಟು ಮಾಡಿ ಅಶಾಂತಿ ಸೃಷ್ಠಿಸಲು ಪ್ರಯತ್ನಿಸಿರುವು ದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು.
‘ಹಿಂದೂ ಜಾಗರಣ ವೇದಿಕೆಯ ಈ ವಿಚಾರಕ್ಕೆ ಶ್ರೀವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿಯವರು ಹಾಗೂ ಅಂಗಡಿ ಮಾಲಿಕರು ಸ್ಪಂದನೆ ನೀಡದೇ ಇದ್ದು, ಆದುದರಿಂದ ನ.19ರಂದು ನಡೆದ ದೇವಸ್ಥಾನದ ಲಕ್ಷ ದೀಪೋತ್ಸವವು ವಿಜೃಂಭಣೆ ಯಿಂದ ನಡೆದಿದೆ. ಇದರಲ್ಲಿ ಎಲ್ಲಾ ಜಾತಿ, ಧರ್ಮದವರು ಭಾಗವಹಿಸಿ ವ್ಯವಹಾರ ನಡೆಸಿದ್ದರು ಎಂದು ಉಡುಪಿ ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.