
ಕನಕದಾಸರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ಕಿರಣವಾಗಿ ಬೆಳಗುತ್ತಿದ್ದಾರೆ: ಪ್ರೊ. ಗಣಪತಿ ಗೌಡ ಎಸ್.
ಮಂಗಳೂರು: ದಾಸಶ್ರೇಷ್ಠರಾದ ಕನಕದಾಸರು ಜಗತ್ತಿಗೆ ಜ್ಞಾನದ ಹಾಗೂ ಭಕ್ತಿಯ ಧಾರೆಯನ್ನು ಎರೆದು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಮೌಢ್ಯತೆ ಮತ್ತು ಮನಸ್ಸಿನ ಅಂಧಕಾರವನ್ನು ತೊಳೆಯುವಲ್ಲಿ ಸಫಲರಾದರು. ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಕಿರಣವಾಗಿ ಬೆಳಗುತ್ತಿರುವರು ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಹೇಳಿದರು.
ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ, ವಿಶ್ವವಿದ್ಯಾನಿಲಯ ಕಾಲೇಜು,ಗ್ರಂಥಾಲಯ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಹಯೋಗದೊಂದಿಗೆ,ಮಂಗಳವಾರ ನಡೆದ ಕನಕದಾಸ ಜಯಂತಿಯ ಅಂಗವಾಗಿ-ಗ್ರಂಥಾವಲೋಕನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು..
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕರಾದ ಪ್ರೊ.ರಾಮಕೃಷ್ಣ ಬಿ.ಎಂ ಅವರು, ಯುವಜನತೆ ಕನಕದಾಸರ ಕುರಿತು ಅವಲೋಕಿಸಿ,ಅವರಂತೆ ಬಾಳಿ ಹಾಗೂ ಅವರ ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು ನಂತರ ಕನಕದಾಸರ ಕುರಿತ ಪುಸ್ತಕ ಪ್ರದರ್ಶನ ಮತ್ತು ಪುಸ್ತಕ ವಿಮರ್ಶೆ ನಡೆಸಲಾಯಿತು.ದ್ವಿತೀಯ ಎಂ. ಎ ಅರ್ಥಶಾಸ್ತ್ರ ವಿಭಾಗದ ರೇಖ,ವಿಶ್ವನಾಥ್,ಚೈತ್ರ ಮತ್ತು ದ್ವಿತೀಯ ಬಿ. ಎ ವಿಭಾಗದ ಅನಿತ ಮತ್ತು ಸಂದೀಪ್ ಪುಸ್ತಕ ವಿಮರ್ಶೆ ಮಾಡಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ. ಜಯವಂತ್ ನಾಯಕ್, ಗ್ರಂಥಪಾಲಕರಾದ ಡಾ.ವನಜಾ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗದ ಉಪನ್ಯಾಸಕಿಯಾದ ಡಾ. ನಾಗರತ್ನ ರಾವ್ ಉಪಸ್ಥಿತರಿದ್ದರು.
ದ್ವಿತೀಯ ಎಂ.ಎ ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಹರ್ಷಪ್ರಭ ಅತಿಥಿಗಳನ್ನು ಸ್ವಾಗತಿಸಿದರು. ದ್ವಿತೀಯ ಎಂ.ಎ. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಭವ್ಯ ನಿರೂಪಿಸಿ, ದ್ವಿತೀಯ ಎಂ.ಎ. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಸುಶ್ಮಿತ ವಂದಿಸಿದರು.