ದಲಿತ ಕಾಲನಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ದಲಿತ ಕುಂದುಕೊರತೆ ಸಭೆಯಲ್ಲಿ ಬೇಡಿಕೆ

ದಲಿತ ಕಾಲನಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ದಲಿತ ಕುಂದುಕೊರತೆ ಸಭೆಯಲ್ಲಿ ಬೇಡಿಕೆ


ಮಂಗಳೂರು: ದಲಿತ ಕಾಲನಿಗಳಲ್ಲಿ ಹದಿಹರೆಯದ ಮಕ್ಕಳು ತಪ್ಪು ದಾರಿ ಹಿಡಿಯದಂತೆ, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂಬ ಬೇಡಿಕೆಯನ್ನು ಹಲವು ಸಮಯದಿಂದ ಮಾಡಲಾಗಿದೆ. ಆದರೆ ಕಾರ್ಯಗತವಾಗಿಲ್ಲ.ಈ ಬಗ್ಗೆ ಪೊಲೀಸ್ ಇಲಾಖೆ ಸಂಬಂಧಪಟ್ಟವರಿಗೆ ಸಲಹೆ ನೀಡಬೇಕು ಎಂದು ಅನಿಲ್ ಕಂಕನಾಡಿಯವರು ಮನವಿ ಮಾಡಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರವಿವಾರ ಡಿಸಿಪಿಗಳಾದ ದಿನೇಶ್ ಕುಮಾರ್ ಮತ್ತು ಸಿದ್ದಾಥ್ರ್ ಗೋಯಲ್ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟಜಾತಿ ಮತ್ತು ಪಂಗಡದ ಮಾಸಿಕ ಕುಂದುಕೊರತೆ ಆಲಿಕೆ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.

ನಗರ ಪಾಲಿಕೆಯಿಂದ ಈಗಾಗಲೇ ಈ ಬಗ್ಗೆ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಕಾರ್ಯ ಮಂಗಳೂರಿನ ಗ್ರಾಮಾಂತರ ಪ್ರದೇಶದಿಂದ ಆರಂಭಿಸಲಾಗುತ್ತಿದೆ. ಆದರೆ ಕ್ಯಾಮರಾ ಅಳವಡಿಕೆ ಕಾರ್ಯ ಮಂಗಳೂರಿನ ನಗರ ಪ್ರದೇಶಗಳು ಮೊದಲು ಆಗಬೇಕು ಎಂದರು.

ಈ ಬಗ್ಗೆ ಪಾಲಿಕೆಗೆ ಮಾಹಿತಿ ನೀಡುವುದಾಗಿ ಡಿಸಿಪಿ ದಿನೇಶ್ ಕುಮಾರ್ ತಿಳಿಸಿದರು.

ಉರ್ವಾಸ್ಟೋರ್ ಬಸ್ಸು ನಿಲ್ದಾಣದ ಬಳಿ ಸಾವಿರಾರು ಸಂಖ್ಯೆಯಲ್ಲಿ ಬೆಳಗ್ಗಿನ ಹೊತ್ತು ಕಾರ್ಮಿಕರು ಸೇರುತ್ತಾರೆ. ಇದರಿಂದಾಗಿ ಆ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಮಾತ್ರವಲ್ಲದೆ, ಅಲ್ಲಿ ಸೇರುವ ಕಾರ್ಮಿಕರು ಆ ಪ್ರದೇಶವನ್ನು ಅಸ್ವಚ್ಛಗೊಳಿಸುತ್ತಾರೆ. ಅಲ್ಲೇ ಕೆಲವೊಂದು ಕಟ್ಟಡ ನಿರ್ಮಾಣದ ಯಂತ್ರಗಳನ್ನು ನಿಲ್ಲಿಸಲಾಗುತ್ತದೆ. ಈ ಬಗ್ಗೆ ಕ್ರಮ ಆಗಬೇಕು ಎಂದು ಸದಾಶಿವ ಉರ್ವಾಸ್ಟೋರ್ ಆಗ್ರಹಿಸಿದರು.

ಈ ಬಗ್ಗೆ ಟ್ರಾಫಿಕ್ ಪೊಲೀಸರಿಂದ ಸಾಕಷ್ಟುಬಾರಿ ಸೂಚನೆ ನೀಡಲಾಗಿದ್ದರೂ ಮತ್ತೆ ಸಮಸ್ಯೆ ಪುನರಾವರ್ತನೆಯಾಗುತ್ತಿದೆ. ನಿರ್ಮಾಣ ಕಾಮಗಾರಿಗಾಗಿ ಕಾರ್ಮಿಕರನ್ನು ಸಾಗಿಸುವ ವಾಹನಗಳವರು ಅಥವಾ ಗುತ್ತಿಗೆದಾರರನ್ನು ಕರೆಸಿ ಅವರಿಗೆ ಸಮೀಪದ ಮೈದಾನ ಅಥವಾ ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಡಿಸಿಪಿ ಹೇಳಿದರು.

ನಗರದ ಖಾಸಗಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದ ರೋಹಿತ್ ಕುಮಾರ್ ಎಂಬವರಿಗೆ ಭತ್ತೆ, ಬೋನಸ್ ಹಣ ಮೊದಲಾದ ಸೌಲಭ್ಯ ನೀಡದೆ ತೊಂದರೆ ಕೊಟ್ಟಿರುವುದಲ್ಲದೆ, ಅವರು ಆ ಉದ್ಯೋಗ ಬಿಟ್ಟು ಬೇರ ಸಂಸ್ಥೆಗೆ ಸೇರಿದ್ದರೂ, ಅವರು ಹಿಂದೆ ನೀಡಿದ್ದ ತಮ್ಮ ಶೈಕ್ಷಣಿಕ ಮೂಲ ದಾಖಲೆಗಳನ್ನು ಹಿಂತಿರುಗಿಸದೆ ಕಿರುಕುಳ ನೀಡಲಾಗುತ್ತಿದೆ ಎಂದು ಆನಂದ್ ಎಸ್.ಪಿ.ಯವರು ಸಭೆಯಲ್ಲಿ ದೂರಿದರು.

ಈ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಿಸಲು ಡಿಸಿಪಿಯವರು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ಹಲವು ಶಾಲೆಗಳ ಗೇಟ್ ಎದುರು ಮಕ್ಕಳನ್ನು ಕರೆತರುವ ವಾಹನಗಳನ್ನು ನಿಲ್ಲಿಸುವುದರಿಂದ ಬೆಳಗ್ಗೆ ಹಾಗೂ ಸಂಜೆ ಶಾಲೆ ಬಿಡುವ ಸಮಯದಲ್ಲಿ ಭಾರೀ ಟ್ರಾಫಿಕ್  ಸಮಸ್ಯೆ ಎದುರಾಗುತ್ತಿದೆ. ಶಾಲೆಯ ಒಳಗೆ ಜಾಗವಿದ್ದು, ವಾಹನಗಳಿಗೆ ಅಲ್ಲಿ ಪ್ರವೇಶ ನೀಡಿ ಮಕ್ಕಳನ್ನು ಬಿಟ್ಟು ಹೋಗಲು ಅವಕಾಶ ಕಲ್ಪಿಸಬೇಕು ಎಂದು ಆನಂದ್ ಎಸ್.ಪಿ.ಯವರು ಸಭೆಯಲ್ಲಿ ಪ್ರಸ್ತಾವಿಸಿದರು.

ಮಂಗಳೂರಿನ ಪುರಭವದಲ್ಲಿ ನಡೆದಿದ್ದ ತುಳು ಜಾನಪದ ಕಾರ್ಯಕ್ರಮದಲ್ಲಿ ನಿಷೇಧಿತ ಪದ ಬಳಕೆ ಆರೋಪಕ್ಕೆ ಸಂಬಂಧಿಸಿ ಕ್ರಮ ಆಗಿಲ್ಲ. ದಲಿತರನ್ನು ಇನ್ನೂ ಅಸ್ಪಶ್ಯರನ್ನಾಗಿ ಸೂಚಿಸುವ ಇಂತಹ ಪದಗಳನ್ನು ಬಳಸಿ ಕಾರ್ಯಕ್ರಮ ಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ದಲಿತ ಮುಖಂಡ ಎಸ್.ಪಿ. ಆನಂದ್ ಹೇಳಿದರು.

ಎಸಿಪಿಗಳಾದ ನಜ್ಮಾ ಫಾರೂಕಿ, ಶ್ರೀಕಾಂತ್, ರವೀಶ್ ನಾಯ್ಕ ಉಪಸ್ಥಿತರಿದ್ದರು. ಎಸಿಪಿ ಧನ್ಯಾ ಸಭೆಯನ್ನು ನಿರ್ವಹಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article