
ಸಂತ ಫಿಲೋಮಿನಾ ಕಾಲೇಜು ಎನ್.ಸಿ.ಸಿ ಘಟಕದಿಂದ ಎನ್.ಸಿ.ಸಿ. ದಿನಾಚರಣೆಯ ಪ್ರಯುತ್ತ ರಕ್ತದಾನ
ಪುತ್ತೂರು: ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇದರ ಎನ್.ಸಿ.ಸಿ. ಘಟಕಗಳಾದ 3/19 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಭೂದಳ 5 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ನೌಕಾದಳವು ತಮ್ಮ 76ನೇ ಎನ್.ಸಿ.ಸಿ. ದಿನಾಚರಣೆಯ ಪ್ರಯುತ್ತ ರಕ್ತದಾನ ಶಿಬಿರವು ಪುತ್ತೂರಿನ ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್ನಲ್ಲಿ ನಡೆಯಿತು.
ಜಿಲ್ಲಾ ರೋಟರಿ 3181ರ ಮಾಜಿ ಸಹಾಯಕ ಗವರ್ನರ್ ಆಸ್ಕಾರ್ ಆನಂದ್ ಅವರು ಕಾರ್ಯಕ್ರಮ ಉದ್ದೇಶಿಸಿ ವಿಶ್ವದ ಅತೀ ದೊಡ್ಡ ಸಮವಸ್ತ್ರದಾರಿತ ಯುವ ಸೈನ್ಯದಳ ತಮ್ಮ 76ನೇ ದಿನಾಚರಣೆ ಆಚರಿಸುವ ಸಂದರ್ಭದಲ್ಲಿ, ಸಂತ ಫಿಲೋಮಿನಾ ಕಾಲೇಜಿನ ಎನ್.ಸಿ.ಸಿ. ಕೆಡೆಟ್ಗಳು ರಕ್ತದಾನ ಮಾಡುವ ಮೂಲಕ ಅತೀ ಅಗತ್ಯ ಇರುವ ರೋಗಿಗಳಿಗೆ ನೆರವು ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ. ಈ ರಕ್ತದಾನ, ಮಾನವೀಯತೆಯ ಅತ್ಯುತ್ತಮ ಉದಾಹರಣೆಯಾಗಿದ್ದು, ಸಮಾಜದ ಒಳಿತಿಗಾಗಿ ಯುವಜನತೆ ನಡೆಸುತ್ತಿರುವ ಸಮರ್ಪಣೆಯ ಸಂದೇಶವನ್ನು ಹೊತ್ತಿದೆ ಎಂದು ಶುಭ ಹಾರೈಸಿದರು.
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಂ. ಅಶೋಕ್ ರಾಯನ್ ಕ್ರಾಸ್ತಾ ಇವರ ಮಾರ್ಗದರ್ಶನದಲ್ಲಿ ಕಾಲೇಜಿನ ಭೂದಳ ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಜೋನ್ಸನ್ ಡೇವಿಡ್ ಸಿಕ್ವೇರಾ ಮತ್ತು ಕಾಲೇಜಿನ ನೌಕಾದಳ ಎನ್.ಸಿ.ಸಿ. ಅಧಿಕಾರಿ ತೇಜಸ್ವಿ ಭಟ್ ಇವರ ಮುಂದಾಳತ್ವದಲ್ಲಿ, ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್’ನ ವೈದ್ಯಾಧಿಕಾರಿ ಡಾ. ರಾಮಚಂದ್ರ, ಬ್ಲಡ್ ಸೆಂಟರ್’ನ ಮೇಲ್ವಿಚಾರಕಿಯಾದ ಸಜನಿ ಮಾರ್ಟಿಸ್ ಮತ್ತು ಸಿಬ್ಬಂದಿಗಳು ಶಿಬಿರವನ್ನು ಯಶಸ್ವಿಯಾಗಿ ನಡೆಸಿದರು. ಕಾಲೇಜಿನ ಎನ್.ಸಿ.ಸಿ ಕೆಡೆಟ್’ಗಳು ರಕ್ತದಾನಿಗಳಾಗಿ ನೆರವಾದರು.