
ಗಮನ ಬೇರೆಡೆ ಸೆಳೆಯಲು ಲ್ಯಾಂಡ್ ಜಿಹಾದ್ ಷಡ್ಯಂತ್ರ: ಕಿಶೋರ್ ಕುಮಾರ್ ಕುಂದಾಪುರ
ಉಡುಪಿ: ಮುಡಾ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಜಮೀರ್ ಅಹ್ಮದ್ಗೆ ಕುಮ್ಮಕ್ಕು ನೀಡಿ ವಕ್ಫ್ ಬೋರ್ಡ್ ಮೂಲಕ ’ಲ್ಯಾಂಡ್ ಜಿಹಾದ್’ ಷಡ್ಯಂತ್ರ ರಚಿಸಿ ರಾಜ್ಯದ ಜನತೆಯನ್ನು ರೊಚ್ಚಿಗೆಬ್ಬಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆರೋಪಿಸಿದ್ದಾರೆ.
ಭ್ರಷ್ಟಾಚಾರ ಮತ್ತು ಹಗರಣಗಳಿಂದ ರಾಜ್ಯದ ಆರ್ಥಿಕತೆ ಸಂಪೂರ್ಣ ಹಳಿತಪ್ಪಿ ದಿವಾಳಿತನದ ಅಂಚಿಗೆ ತಲುಪಿದ್ದರೂ, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳಿರುವ ಸಿದ್ದರಾಮಯ್ಯ, ಇದೀಗ ಸಚಿವ ಜಮೀರ್ ಅಹ್ಮದ್ ಮೂಲಕ ವಕ್ಫ್ ಅದಾಲತ್ ನಡೆಸಿ, ರಾಜ್ಯಾದ್ಯಂತ ನೂರಾರು ವರ್ಷಗಳ ಇತಿಹಾಸವಿರುವ ಮಠ ಮಂದಿರ, ದೇವಸ್ಥಾನಗಳ ಸಹಿತ ರೈತರ ಸ್ಥಿರಾಸ್ತಿಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರನ್ನು ಅನಧಿಕೃತವಾಗಿ ಸೇರ್ಪಡೆಗೊಳಿಸಿ ಮುಸ್ಲಿಂ ತುಷ್ಟೀಕರಣ ನೀತಿಯ ಪರಮಾವಧಿ ಪ್ರದರ್ಶಿಸಿರುವುದು ಅತ್ಯಂತ ಖಂಡನೀಯ ಎಂದವರು ತಿಳಿಸಿದ್ದಾರೆ.
ಮುಡಾ ಹಗರಣದಲ್ಲಿ ಸೈಟು ವಾಪಾಸು ನೀಡಿದ ಪ್ರಹಸನದಂತೆ ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದಿರುವ ಸಿ.ಎಂ. ಸಿದ್ದರಾಮಯ್ಯ 1974ರ ಗಜೆಟ್ ನೋಟಿಫಿಕೇಶನ್ ಹಿಂಪಡೆದು ರದ್ದು ಮಾಡುವ ಎದೆಗಾರಿಕೆ ತೋರುವುದು ಇಂದಿನ ಅಗತ್ಯತೆ. ಹಿಂದೂ ವಿರೋಧಿ ನೀತಿಯನ್ನೇ ರಾಜಕೀಯ ಬಂಡವಾಳವನ್ನಾಗಿಸಿಕೊಂಡಿರುವ ಸಿದ್ದರಾಮಯ್ಯ ತನ್ನ ಸ್ವಯಂಕೃತ ಅಪರಾಧದಿಂದ ಕಂಗೆಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸುವ ವಿಫಲ ಯತ್ನದಲ್ಲಿ ತೊಡಗಿರುವುದು ಹಾಸ್ಯಾಸ್ಪದ ಎಂದು ಕಿಶೋರ್ ತಿಳಿಸಿದ್ದಾರೆ.