
ಪೊಲೀಸ್ ಕಿರುಕುಳ: ಪತ್ರಕರ್ತರ ಪ್ರತಿಭಟನೆ
ಕಾಸರಗೋಡು: ಸುದ್ದಿಮೂಲದ ಬಗ್ಗೆ ಮಾಹಿತಿ ಒದಗಿಸುವಂತೆ ಪತ್ರಕರ್ತರೊಬ್ಬರಿಗೆ ಪೊಲೀಸರು ನೀಡುತ್ತಿರುವ ಕಿರುಕುಳ ಪ್ರತಿಭಟಿಸಿ ಕೇರಳ ವರ್ಕಿಂಗ್ ಜರ್ನಲಿಸ್ಟ್ ಯೂನಿಯನ್(ಕೆಯುಡಬ್ಲುಜೆ) ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ, ಸಭೆ ಕಾಸರಗೋಡು ನಗರದಲ್ಲಿ ನಡೆಯಿತು.
ಪತ್ರಕರ್ತ ಅನಿರು ಅಶೋಕನ್ ಎಂಬುವವರ ಮೊಬೈಲ್ ವಶಪಡಿಸಿಕೊಂಡಿರುವ ಕ್ರೈಂ ಬ್ರಾಂಚ್ ಪೊಲೀಸರ ಕ್ರಮ ಖಂಡಿಸಿ ಪತ್ರಕರ್ತರು ರಾಜ್ಯವ್ಯಾಪಿ ನಡೆಸಿದ ಪ್ರತಿಭಟನೆ ಅಂಗವಾಗಿ ಕಾಸರಗೋಡಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಸರಗೋಡು ಪ್ರೆಸ್ ಕ್ಲಬ್ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರೆಸ್ಕ್ಲಬ್ ಜಂಕ್ಷನ್ ಮೂಲಕ ಸಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಸಮಾರೋಪಗೊಂಡಿತು.
ಪ್ರೆಸ್ ಕ್ಲಬ್ ಅಧ್ಯಕ್ಷ ಸಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಮಾಜಿ ಸದಸ್ಯ ಕೆ.ವಿ.ಪದ್ಮೇಶ್, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಅಬ್ದುಲ್ಲಕುಞಿ ಉದುಮ, ಜತೆ ಕಾರ್ಯದರ್ಶಿ ಪುರುಷೋತ್ತಮ್ ಪೆರ್ಲ, ಶಫೀಕ್ ನಸರುಲ್ಲಾ, ಶಾಫಿ ತೆರುವತ್, ಉದಿನೂರು ಸುಕುಮಾರನ್ ಉಪಸ್ಥಿತರಿದ್ದರು.
ಖಾಲಿದ್ಪೊವ್ವಾಲ್, ದೇವದಾಸ್ ಪರಕಟ್ಟೆ, ಮಣಿಕಂಠನ್ ಪಾಲಿಚ್ಚಿಯಡ್ಕ, ಕುಞಿಕಣ್ಣನ್ ಮುಟ್ಟತ್, ಅಮಲ್, ಜುಬೇರ್ ಪಳ್ಳಿಕಲ್ ಮೊದಲಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.