ಜ.1 ರಿಂದ ಹೈನುಗಾರರ ನೆರವಿಗೆ ವಿಶೇಷ ಪ್ರೋತ್ಸಾಹಧನ 1.50 ರೂ.ಗೆ ಹೆಚ್ಚಳ: ಸುಚರಿತ ಶೆಟ್ಟಿ

ಜ.1 ರಿಂದ ಹೈನುಗಾರರ ನೆರವಿಗೆ ವಿಶೇಷ ಪ್ರೋತ್ಸಾಹಧನ 1.50 ರೂ.ಗೆ ಹೆಚ್ಚಳ: ಸುಚರಿತ ಶೆಟ್ಟಿ


ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ದ.ಕ. ಹಾಲು ಒಕ್ಕೂಟ ಹೈನುಗಾರರ ನೆರವಿಗೆ ವಿಶೇಷ ಪ್ರೋತ್ಸಾಹಧನವನ್ನು ಜನವರಿ 1 ರಿಂದ 1.00 ರೂ. ನಿಂದ 1.50 ರೂ.ಗಳಿಗೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದ್ದಾರೆ.

ಮಂಗಳೂರಿನ ಕುಲಶೇಖರ ಹಾಲಿನ ಡೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರ ನೀಡಿದರು.

ಅದೇ ರೀತಿ 4.5 ಫ್ಯಾಟ್‌ನಿಂದ 8.5 ಎಸ್‌ಎನ್‌ಎಫ್‌ಗೆ ರೈತರಿಗೆ ನೀಡುವ ದರವನ್ನು 36.74 ರೂ.ನಿಂದ 36.95 ರೂ.ಗೆ ಏರಿಕೆ ಮಾಡಲಾಗಿದೆ. ಡಿಸೆಂಬರ್ ಅಂತ್ಯದವರೆಗೆ  ಅಂದಾಜು 870 ಕೋಟಿ ರೂ. ವ್ಯವಹಾರ ನಡೆಸಿ 7.76 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ ಇದೆ ಎಂದರು.

ಪ್ರಸ್ತುತ ಒಕ್ಕೂಟ ವ್ಯಾಪ್ತಿಯಲ್ಲಿ 749 ಸಂಘಗಳು ಕಾರ್ಯಾಚರಿಸುತ್ತಿದ್ದು, 51,138 ಸಕ್ರಿಯ ಸದಸ್ಯರಿಂದ ದಿನವಹಿ 3,40,158 ಲೀ. ಹಾಲು ಸಂಗ್ರಹಣೆಯಾಗುತ್ತಿದೆ.  ಪ್ರಸ್ತುತ 16 ಪಶು ವೈದ್ಯಕೀಯ ಶಿಬಿರ ಕಚೇರಿಗಳು ಇವೆ. ಒಕ್ಕೂಟದ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ದಿನವಹಿ ಸರಾಸರಿ 4.01 ಲಕ್ಷ ಲೀ. ಹಾಲು, 78,000  ಕೆ.ಜಿ ಮೊಸರು, ಮಾಸಿಕ 75 ಟನ್ ಪನೀರ್, ತುಪ್ಪ 153 ಟನ್, 1 ಟನ್ ಒಕ್ಕೂಟದ ಸಿಹಿ ಉತ್ಪನ್ನ ಮತ್ತು ಸುವಾಸಿತ ಹಾಲು, 2 ಟನ್ ಕರ್ನಾಟಕ ಹಾಲು  ಮಹಾಮಂಡಳಿಯ ಸಿಹಿ ಉತ್ಪನ್ನ ಒಕ್ಕೂಟದಲ್ಲಿ ಮಾರಾಟವಾಗುತ್ತಿದೆ. ಕೊರತೆಯಾದ ಹಾಲನ್ನು ಅವಶ್ಯಕತೆಗೆ ಅನುಗುಣವಾಗಿ ಇತರ ಒಕ್ಕೂಟಗಳಿಂದ ಖರೀದಿಸಲಾಗುತ್ತಿದೆ  ಎಂದರು.

ಗುಣಮಟ್ಟದ ಪಶು ಆಹಾರ:

ಒಕ್ಕೂಟದ ವ್ಯಾಪ್ತಿಯಲ್ಲಿ ರಾಸುಗಳಿಗೆ ಅಗತ್ಯವಾಗಿ ಬೇಕಾಗಿರುವ ನಂದಿನಿ ಪಶು ಆಹಾರ ಪ್ರತಿ ತಿಂಗಳು ಸರಾಸರಿ 5,500 ಮೆ.ಟನ್ ಪ್ರತಿ ಟನ್‌ಗೆ 25,000 ರೂ.ನಂತೆ ಮಾರಾಟವಾಗುತ್ತಿದೆ. ಪಶು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ ತಿಂಗಳು ಪಶು ಆಹಾರದ ಮಾದರಿಯನ್ನು ಪರೀಕ್ಷಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ.

ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಪ್ರಸ್ತುತ ಮಾಸಿಕ 600 ಮೆ.ಟನ್ ರಸಮೇವನ್ನು ಸಂಘಗಳಿಗೆ ಪ್ರತಿ ಕೆ.ಜಿ.ಗೆ 7.50 ರೂ.ನಂತೆ ಒದಗಿಸಲಾಗುತ್ತಿದೆ ಎಂದರು.

ಹಸು ಖರೀದಿಗೆ ಅನುದಾನ:

ಉತ್ತಮ ರಾಸುಗಳಿಗಾಗಿ ದಕ್ಷಿಣ ಭಾರತದ ಈರೋಡ್‌ನಲ್ಲಿ ಕಡಿಮೆ ದರದಲ್ಲಿ ಉತ್ತಮ ತಳಿಯ ಜಾನುವಾರುಗಳು ಲಭ್ಯವಿರುವುದನ್ನು ಗುರುತಿಸಿ ಹೈನುಗಾರರಿಗೆ ಅವರ ಬೇಡಿಕೆಗೆ ಅನುಗುಣವಾಗಿ ರಾಸುಗಳನ್ನು ಖರೀದಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪ್ರತೀ ರಾಸುವಿಗೆ 16,000 ರೂ.ಗಳಷ್ಟು ಅನುದಾನವನ್ನು ರಾಸು ಸಾಗಾಣಿಕೆಗೆ,  ವಿಮೆಗಾಗಿ, ಉಚಿತ ಪಶು ಆಹಾರಕ್ಕಾಗಿ ನೀಡಲಾಗುತ್ತಿದೆ ಎಂದರು.

ಒಕ್ಕೂಟವು ಹೈನುಗಾರರ ಹಿತಾಸಕ್ತಿಯನ್ನು ಕಾಪಾಡಲು ಈಗಾಗಲೇ ವಿವಿಧ ಯೋಜನೆಗಳಾದ ರಾಸು ವಿಮೆ ಶೇ.೭೫ರಅನುದಾನದಲ್ಲಿ, ಹೆಣ್ಣು ಕರು ಸಾಕಾಣಿಕೆ ಯೋಜನೆ,  ಹಸಿರು ಮೇವು ಯೋಜನೆ, ವಾಣಿಜ್ಯ ಡೇರಿ ಘಟಕ, ಹೊರ ಜಿಲ್ಲೆ/ರಾಜ್ಯದಿಂದ ರಾಸು ಖರೀದಿಸಿದಲ್ಲಿ ಸಾಗಾಣಿಕೆ ವೆಚ್ಚ ಹಾಲು ಹೆಚ್ಚಳ ಕಾರ್ಯಕ್ರಮ, ರೈತರು ಮರಣ ಹೊಂದಿದಾಗ, ದನ ಕಳ್ಳತನ, ಹಟ್ಟಿ ಹಾನಿಗೆ ಪರಿಹಾರ ಇತ್ಯಾದಿ ಅನುದಾನಗಳನ್ನು ಒಕ್ಕೂಟದ ಮೂಲಕ ನಿರಂತರ ನೀಡಲಾಗುತ್ತಿದೆ. ಎಂದರು.

ಒಕ್ಕೂಟ ತನ್ನ ಸಂಪನ್ಮೂಲದಿಂದ ಹಾಲು ಹೆಚ್ಚಳ ಕಾರ್ಯಕ್ರಮದಡಿ ಹೈನುಗಾರರಿಗೆ 4.88 ಕೋಟಿ ರೂ. ಮೀಸಲಿಡಲಾಗಿದ್ದು, 1 ರೂ. ಪ್ರೋತ್ಸಾಹ ಧನದಂತೆ 9.46  ಕೋಟಿ ರೂ., ಗುಣಮಟ್ಟಕ್ಕೆ ಪ್ರೋತ್ಸಾಹ ಧನ ಮತ್ತು ಸಂಘದ ಸಿಬ್ಬಂದಿ ಪ್ರೋತ್ಸಾಹ ಧನ 3.16 ಕೋಟಿ ರೂ., ರಾಸು ವಿಮೆಗಾಗಿ ಒಕ್ಕೂಟದಿಂದ 3 ಕೋಟಿ ರೂ.ಗಳಷ್ಟು ಅನುದಾನ ನೀಡಲಾಗಿದೆ ಎಂದರು. 

ಬೇರೆ ಕಡೆಗಿಂತ ಜಾಸ್ತಿ ಖರೀದಿ ಮೊತ್ತಕ್ಕೆ ಬೇಡಿಕೆ:

ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಮೇವಿನ ಕೊರತೆ, ವಾತಾವರಣದ ಅಧಿಕ ಉಷ್ಣತೆ, ಪಶು ಆಹಾರದ ಕೊರತೆ ಮತ್ತು ಕೂಲಿ ಕಾರ್ಮಿಕರ ತೀವ್ರ  ಅಭಾವದಿಂದ ಹೈನುಗಾರಿಕೆ ಕಷ್ಟ ಸಾಧ್ಯವಾಗಿದೆ. ಸಂಘಗಳ ಮುಖಾಂತರ ಹಾಲು ಶೇಖರಣೆಯು ಅಪೇಕ್ಷಿಸಿದಷ್ಟು ಅಭಿವೃದ್ಧಿಯಾಗಿಲ್ಲ. ಇದರಿಂದಾಗಿ ಸಂಘಗಳಲ್ಲಿ ಹಾಲು  ಶೇಖರಣೆ ಕಡಿಮೆಯಾಗಿ ಸಂಘಗಳ ಲಾಭಾಂಶ ಕಡಿಮೆಯಾಗುತ್ತಿದೆ. ಭೌಗೋಳಿಕವಾಗಿ ಹಾಲು ಉತ್ಪಾದನೆ ಇಲ್ಲಿ ಸುಲಭವಲ್ಲ. ಅದಕ್ಕಾಗಿ ಪ್ರತಿ ಲೀಟರ್ ಹಾಲಿಗೆ ಬೇರೆ  ಕಡೆಗಿಂತ ಜಾಸ್ತಿ ಸಬ್ಸಿಡಿ ಮೊತ್ತ ನೀಡಬೇಕು. ಅಂದರೆ 6 ರೂ.ನಿಂದ 8 ರೂ. ವರೆಗೆ ಹೆಚ್ಚುವರಿ ಸಬ್ಸಿಡಿ ಮೊತ್ತ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಲಾಗಿದೆ  ಎಂದು ಅಧ್ಯಕ್ಷ ಸುಚರಿತ ಶೆಟ್ಟಿ ಹೇಳಿದರು.

ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ್ ರೈ, ಮಾಜಿ ಅಧ್ಯಕ್ಷರಾದ ದಿವಾಕರ್ ಶೆಟ್ಟಿ ಕಾಪು, ರವಿರಾಜ ಹೆಗ್ಡೆ ನಿರ್ದೇಶಕರಾದ ನಾರಾಯಣ ಪ್ರಕಾಶ್, ಸವಿತಾ ಶೆಟ್ಟಿ,  ಸದಾಶಿವ ಶೆಟ್ಟಿ, ನರಸಿಂಹ ಕಾಮತ್, ಸುಧಾಕರ್ ರೈ, ವ್ಯವಸ್ಥಾಪಕ ನಿರ್ದೇಶಕ ವಿವೇಕ್, ಮಾರುಕಟ್ಟೆ ವಿಭಾಗದ ಅಧಿಕಾರಿ ರವಿರಾಜ್ ಉಡುಪ ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article