ಮಾತು ಬಾರದ ಅಯ್ಯಪ್ಪ ಮಾಲಾಧಾರಿ ಬಾಲಕನಿಗೆ ಬಂತು ಮಾತು...
ಮಂಗಳೂರು: ಒಂದು ಶಬ್ದ ಕೂಡಾ ಸರಿಯಾಗಿ ಮಾತನಾಡಲು, ಕೇಳಲು ಸಾಧ್ಯವಾಗದ ಬಾಲಕನೊಬ್ನನಿಗೆ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯಲು ಮಾಲೆ ಧರಿಸಿ ವೃತಾಧರಿಯಾಗಿರುವಾಗಲೇ ಮಾತು ಬಂದ ಪವಾಡ ಪ್ರಸಂಗವೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಪ್ರಸನ್ನ ಇದೀಗ ಮಾತನಾಡುವ ಮೂಲಕ, ಕೇಳಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಸಣ್ಣ ಮಕ್ಕಳು ಮೊದ ಮೊದಲಿಗೆ ಯಾವ ರೀತಿ ತೊದಲು ಮಾತನಾಡುತ್ತಾರೋ, ಅದೇ ರೀತಿಯಲ್ಲಿ ಬಾಲಕ ಪ್ರಸನ್ನ ಮಾತನಾಡಲು ಆರಂಭಿಸಿದ್ದಾನೆ. ಒಂದು ಶಬ್ದವನ್ನೂ ಕೂಡಾ ಸರಿಯಾಗಿ ಮಾತನಾಡದ ಪ್ರಸನ್ನ ಕಳೆದ ವರ್ಷ ಅಯ್ಯಪ್ಪ ಮಾಲೆ ಧರಿಸಿ, ನಲವತ್ತೆಂಟು ದಿನಗಳ ಕಾಲ ಕಠಿಣ ವೃತಾಚರಣೆ ನಡೆಸಿ ಶಬರಿಮಲೆ ಏರಿದ್ದ. ಸುಮಾರು 48 ಮೈಲು ದುರ್ಗಮ ಕಾಡಿನ ಹಾದಿಯಲ್ಲಿ ಸಾಗಿ ಸ್ವಾಮಿ ದರ್ಶನವನ್ನು ಪಡೆದಿದ್ದ ಈ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ. ಮಾತನಾಡಲೂ ಚಡಪಡಿಸುತ್ತಿದ್ದ ಪ್ರಸನ್ನ ಇಂದು ಅಯ್ಯಪ್ಪ ಸ್ವಾಮಿಯ ಹೆಸರು ಹೇಳಿ ಶರಣು ಕರೆಯುತ್ತಾನೆ. ಎಂಟು ಶರಣನ್ನು ಪ್ರಸನ್ನ ಯಾವುದೇ ತೊಂದರೆಯಿಲ್ಲದೆ ಕರೆಯುತ್ತಾರೆ. ಬಳಿಕದ ಶಬ್ದಗಳು ಅಷ್ಟು ಸ್ಪಷ್ಟವಾಗಿಲ್ಲದಿದ್ದರೂ, ಅರ್ಥವಾಗುವಷ್ಟಿದೆ. ಈ ಬಾರಿ ಮತ್ತೆ ಅಯ್ಯಪ್ಪ ಮಾಲೆ ಧರಿಸಿ ಮಲೆ ಏರಲು ಸಿದ್ಧತೆ ನಡೆಸಿದ್ದಾನೆ. ಈ ಬಾರಿ ಮಲೆ ಏರಿದರೆ ಪ್ರಸನ್ನ ಇನ್ನಷ್ಟು ಸ್ಪಷ್ಟವಾಗಿ ಮಾತನಾಡುವ ಸಾಧ್ಯತೆಯಿದೆ ಎನ್ನುವ ನಿರೀಕ್ಷೆ ಹಿರಿಯ ಸ್ವಾಮಿಗಳಲ್ಲಿದೆ.
ಮೊದಲ ಬಾರಿಗೆ ಮಾಲೆ ಧರಿಸಲು ಬಂದಾಗ ಕೇಳಲು ಮತ್ತು ಮಾತನಾಡಲು ಆಗದ ಸ್ಥಿತಿಯಲ್ಲಿದ್ದ ಪ್ರಸನ್ನನಿಗೆ ಇದೀಗ ಒಂದು ಕಿವಿ ಕೇಳಿಸುತ್ತಿದೆ, ಮಾತನಾಡಲು ಶಬ್ದಗಳು ಹೊರಡುತ್ತಿದೆ ಮೊದಲ ಬಾರಿಗೆ ಮಾಲೆ ಹಾಕಲು ಬಂದ ಸಂದರ್ಭದಲ್ಲಿ ಕೈ ಸನ್ನೆಯ ಮೂಲಕ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ ಪ್ರಸನ್ನ ಇದೀಗ ಮಾತನಾಡಲಾರಂಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಗುರುಸ್ವಾಮಿಗಳು ಇದೊಂದು ಅಯ್ಯಪ್ಪ ಸ್ವಾಮಿಯ ಪವಾಡ ಎನ್ನುತ್ತಿದ್ದಾರೆ.
ಪ್ರಸನ್ನ ಪುತ್ತೂರಿನ ಮಹಾಲಿಂಗೇಶ್ವರ ಐಟಿಐನಲ್ಲಿ ಎರಡನೇ ವರ್ಷದ ಸಿವಿಲ್ ಡಿಪ್ಲೊಮಾ ಮಾಡುತ್ತಿದ್ದಾರೆ.