ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಗರಿ ಗೆದರಿದ ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ
Monday, December 23, 2024
ಜೀವನದಲ್ಲಿ ಹಣ ಗಳಿಸುವುದು ಮುಖ್ಯವಲ್ಲ, ನಮ್ಮನ್ನೇ ನಾವು ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು: ರೊನಾಲ್ಡ್ ಎಸ್. ಡಿ’ಸೋಜಾ
ಪುತ್ತೂರು: ನಾವು ಚಿಕ್ಕವರಾಗಿರಲಿ ಅಥವಾ ದೊಡ್ಡವರಾಗಿರಲಿ ಎಲ್ಲರ ಸಾಧನೆಗಳನ್ನು ಗುರುತಿಸಿ ಶ್ಲಾಘಿಸೋಣ ಮತ್ತು ಅವರನ್ನು ಅನೇಕ ವಿಜಯಗಳಿಗೆ ಪ್ರೇರೇಪಿಸೋಣ. ಇನ್ನೊಬ್ಬರ ಯಶಸ್ಸನ್ನು ಅಸೂಯೆಯಿಂದ ನೋಡದೆ ಸಂತೋಷ ಮತ್ತು ಸ್ಫೂರ್ತಿಯಿಂದ ನೋಡುವ ವಾತಾವರಣವನ್ನು ನಿರ್ಮಿಸೋಣ ಎಂದು ಲೆಕ್ಸಾ ಲೈಟಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಇದರ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ರೊನಾಲ್ಡ್ ಎಸ್. ಡಿ’ಸೋಜಾ ಹೇಳಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಡಿಸೆಂಬರ್ 21 ಹಾಗೂ 23 ರಂದು ಕಾಲೇಜು ಪ್ರಾಂಗಣದಲ್ಲಿ ನಡೆದ ‘ಫಿಲೋ ಉತ್ಸವ ಹಾಗೂ ಪ್ರತಿಭಾ ಪುರಸ್ಕಾರ’ದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಜಾತಿ, ಹಣ, ಧರ್ಮ ಇವುಗಳಿಂದ ಮನುಷ್ಯನ ವ್ಯಕ್ತಿತ್ವ ಅಳೆಯಬಾರದು. ಅವನ ಗುಣ, ಸಾಧನೆಯಿಂದ ವ್ಯಕ್ತಿತ್ವ ಅಳೆಯಬೇಕು. ರಾತೋರಾತ್ರಿ ಯಾರು ಸಾಧಕ ರಾಗುವುದಿಲ್ಲ. ದುಡಿಯದೇ ಶ್ರೀಮಂತರಾದ ಉದಾಹರಣೆಗಳಿಲ್ಲ. ಅಂತಹ ಶ್ರೀಮಂತಿಕೆ ಬಹಳ ದಿನ ಉಳಿದ ದೃಷ್ಟಾಂತಗಳು ನಮ್ಮ ಕಣ್ಣ ಮುಂದೆ ಇಲ್ಲ. ವಿದ್ಯಾರ್ಥಿಗಳು ಸರಿಯಾದ ಮಾರ್ಗದರ್ಶನದಲ್ಲಿ ನಡೆಯಬೇಕು. ಉತ್ತಮ ಸಾಧನೆ ಹಾಗೂ ಒಳ್ಳೆಯ ನಡವಳಿಕೆ ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಗೌರವ ಅತಿಥಿ ಪದವಿ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟೋನಿ ಪ್ರಕಾಶ್ ಮೊಂತೇರೋ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿ’ಕೋಸ್ಟಾ ಹಾಗೂ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಡಾ. ಪ್ರಕಾಶ್. ಬಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ವಂ. ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಯಾವುದೇ ಗುರಿಯನ್ನು ಸಾಧಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ನಿರಂತರವಾಗಿ ಕೆಲಸ ಮಾಡುವುದು ಬಹಳ ಮುಖ್ಯ. ತಾಳ್ಮೆ ಮತ್ತು ಸಂಯಮ ಗುಣಗಳು ಒಬ್ಬ ವ್ಯಕ್ತಿಯನ್ನು ಕಷ್ಟಕರ ಸಂದರ್ಭಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಯಾವುದೇ ವಿಷಯದಲ್ಲಿ ಆತುರ ಪಡುವ ಬದಲು ತಾಳ್ಮೆಯಿಂದ ಶ್ರದ್ಧೆವಹಿಸಿ ಕೆಲಸ ಮಾಡುವತ್ತ ಗಮನ ಹರಸಬೇಕು. ಯಶಸ್ಸು ಸಾಧಿಸಲು ಕಠಿಣ ಪರಿಶ್ರಮವು ಅಷ್ಟೇ ಅಗತ್ಯ. ಅದೆಷ್ಟೋ ಸಲ ಗುರಿಯತ್ತ ಹೆಜ್ಜೆ ಹಾಕುವಾಗ ಸೋಲು ಬೆಂಬಿಡದೇ ಕಾಡಬಹುದು. ಈ ವೇಳೆಯಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿರಲೇಬೇಕು ಎಂದು ಹೇಳಿದರು.
ಸಾಹಿತ್ಯಕ, ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ. ಮತ್ತು ರೋವರ್ಸ್ ರೇಂಜರ್ಸ್ನ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 8ನೇ ರ್ಯಾಂಕ್ ಪಡೆದ ಪಿ. ಹಲಿಮತ್ ಶೈಮಾ, 10ನೇ ರ್ಯಾಂಕ್ ಪಡೆದ ಪ್ರವನ್ ಪೊನ್ನಪ್ಪ ಎಂ.ಎನ್., ವಾಣಿಜ್ಯ ವಿಭಾಗದಲ್ಲಿ 10ನೇ ರ್ಯಾಂಕ್ ಪಡೆದ ಪ್ರತೀಕ್ಷಾ. ಡಿ.ಎಸ್. ಇವರನ್ನು ಸನ್ಮಾನಿಸಲಾಯಿತು ಹಾಗೂ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಪ್ರತಿ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಸಕ್ತ ವರ್ಷದ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಪ್ರಸಕ್ತ ವರ್ಷದ ‘ಬಹುಮುಖ ಪ್ರತಿಭಾ’ ಪ್ರಶಸ್ತಿಯನ್ನು ದ್ವಿತೀಯ ವಿಜ್ಞಾನ ವಿಭಾಗದ ಪ್ರಾರ್ಥನಾ ಬಿ. ಮತ್ತು ಸಮಗ್ರ ಪ್ರಶಸ್ತಿಯನ್ನು ದ್ವಿತೀಯ ಪಿ.ಸಿ.ಎಂ.ಬಿ-ಸಿ ತರಗತಿಗೆ ನೀಡಿ ಅಭಿನಂದಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ವಿದ್ಯಾರ್ಥಿ ಸಂಘದ ನಿರ್ದೇಶಕ ಪ್ರಶಾಂತ್ ಭಟ್. ಪಿ, ಫಿಲೋಮಿನಾ ಮೊಂತೇರೋ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಂಕಿತ ಎಲ್.ಡಿ, ಸ್ವಾಗತಿಸಿ, ಕಾರ್ಯದರ್ಶಿ ಧ್ರುವ ಜೆ. ಭಂಡಾರಿ ಅತಿಥಿಗಳನ್ನು ಪರಿಚಯಿಸಿ, ಜತೆ ಕಾರ್ಯದರ್ಶಿ ಸೃಧನ್. ಕೆ. ಆಳ್ವ ವಂದಿಸಿದರು. ಉಪನ್ಯಾಸಕ ರಾಹುಲ್ ಕಾರ್ಯಕ್ರಮ ನಿರೂಪಿಸಿದರು.












