
ಶಿರ್ವ ಪಂಜಿಮಾರು ಕೋಡು ಪರಿಸರದಲ್ಲಿ ಚಿರತೆಯ ಓಡಾಟ...!
ಶಿರ್ವ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಮಾರು ಕೋಡು ಪರಿಸರದಲ್ಲಿ ಹಗಲು ಹೊತ್ತಿನಲ್ಲೇ ಚಿರತೆಯ ಓಡಾಟ ನಡೆಸಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಕೆಲವು ದಿನಗಳಿಂದ ಹಲವರ ಮನೆಗಳ ನಾಯಿಗಳು ಮಾಯವಾಗಿವೆ...! ಮಂಗಳವಾರ ಬೆಳಿಗ್ಗೆ ಪಂಜಿಮಾರು ಸೋದೆ ಮಠದ ಬಳಿ ರಸ್ತೆಯಲ್ಲಿ ಬೈಕ್ ಸವಾರನಿಗೆ ಚಿರತೆ ಅಡ್ಡ ಬಂದಿದ್ದು ಸವಾರ ಕಂಗಾಲಾಗಿದ್ದಾನೆ. ಆತ ತಾಯಿಯನ್ನು ಕೋಡು ಬಸ್ಸು ತಂಗುದಾಣಕ್ಕೆ ಬಿಟ್ಟು ವಾಪಾಸ್ ಹೋಗುವಾಗ ಈ ಘಟನೆ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಪಂಜಿಮಾರು ಪಡುಮನೆಯ ನಾಯಿ ಹಾಗೂ ಪಂಜಿಮಾರು ಆನಂದ ಕುಲಾಲ್ ಅವರ ಮನೆಯ ಸಾಕು ನಾಯಿಗಳನ್ನು ತಿಂದಿದೆ ಎಂದು ಮನೆಯವರು ತಿಳಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಂದು ಅರಣ್ಯ ರಕ್ಷಕ ಚರಣ್ ಜೋಗಿ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಬೋನು ತಂದು ಇರಿಸಿದ್ದಾರೆ.
ಇತ್ತಿಚಿನ ಹಲವು ದಿನಗಳಿಂದ ಪಡುಬೆಳ್ಳೆ, ಕುರ್ಕಾಲು, ಕುಂಜಾರು ಭಾಗದಲ್ಲಿ ಚಿರತೆಯ ಹಾವಳಿ ಬಗ್ಗೆ ದೂರುಗಳು ಬಂದಿದ್ದು ಅರಣ್ಯ ಇಲಾಖೆಯವರಿಗೆ ಮಾಮೂಲಿ ಸಂಗತಿಯಾಗಿದೆ. ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಹಳ್ಳಿಯಿಂದ ಪೇಟೆಗೆ ಬರುವ ನಾಗರಿಕರು ಭಯದಲ್ಲೇ ಹೆಜ್ಜೆ ಇಡುವಂತಾಗಿದೆ. ಸೈಕಲ್, ಸ್ಕೂಟರ್, ಬೈಕ್ ಸವಾರರೂ ಭಯದಲ್ಲೇ ವಾಹನ ಚಲಾಯಿಸುವ ಪರಿಸ್ಥಿತಿ ಉಂಟಾಗಿದೆ.
ಸ್ಥಳೀಯ ಆಡಳಿತ ಸಂಬಂಧ ಪಟ್ಟ ಇಲಾಖೆಯೊಂದಿಗೆ ನಿಕಟ ಸಂಪರ್ಕ ಇಟ್ಟು ನಾಗರಿಕರ ರಕ್ಷಣೆಗೆ ಮುಂದಾದಬೇಕು ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.