
ನಿಶ್ಚಿತಾರ್ಥಗೊಂಡ ಯುವಕ ಆತ್ಮಹತ್ಯೆ
ಬಂಟ್ವಾಳ: ವಿವಾಹ ನಿಶ್ಚಿತಾರ್ಥವಾಗಿದ್ದು, ಯುವಕ ಇನ್ನೊಂದು ಹುಡುಗಿಗೆ ಇನ್ಟ್ರೋಗ್ರಾಮ್ನಲ್ಲಿ ಲೈಕ್ ನೀಡಿದ್ದನ್ನು ಪ್ರಶ್ನಿಸಲೆಂದು ಭಾವಿ ವಧು ಬಂದಿದ್ದು, ಈ ಸಂದರ್ಭ ಇವರೊಳಗಿನ ಮಾತುಕಥೆ ಯುವಕನ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾದ ಘಟನೆ ಜ.21ರಂದು ಸಂಭವಿಸಿದೆ.
ಬಂಟ್ವಾಳ ತಾ. ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಮನೆ ನಿವಾಸಿ ಪುಷ್ಪಾ ಹಾಗೂ ದಿ. ಯೋಗೀಶ್ ಅವರ ಚೇತನ್(25) ಆತ್ಮಹತ್ಯೆಗೈದ ರ್ದುದೈವಿಯಾಗಿದ್ದಾನೆ.
ಚೇತನ್ ದೈವದ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದು, ಚೇತನ್ಗೆ ಇನ್ಸ್ಟ್ರಾಗ್ರಾಮ್ನಲ್ಲಿ ಪರಿಚಯವಾದ ಮಂಗಳೂರು ತಾಲೂಕು ಕಂದಾವರ ಗ್ರಾಮದ ಓಣಿಬಾಗಿಲು ನಿವಾಸಿಯಾಗಿರುವ ಯುವತಿಯೋರ್ವಳ ಜೊತೆ ಸುಮಾರು 8 ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು.
ಜ.21 ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಚೇತನ್ ಮಾತ್ರ ಮನೆಯಲ್ಲಿದ್ದು, ಈತನ ತಾಯಿ ಪುಷ್ಪಾ ಅವರು ತನ್ನ ತವರು ಮನೆಗೆ ತೆರಳಿದ್ದರು. ಈ ಸಮಯ ಚೇತನ್ನನ್ನು ನಿಶ್ಚಿತಾರ್ಥವಾಗಿದ್ದ ಯುವತಿ ಮೊಬೈಲ್ನಿಂದ ಪುಷ್ಪಾ ಅವರಿಗೆ ಕರೆ ಮಾಡಿ, ನಾನು ನಿಮ್ಮ ಮನೆಗೆ ಬಂದಿದ್ದೇನೆ, ಚೇತನ್ ಮನೆಯಲ್ಲಿ ಮಲಗಿದ್ದು ಎದ್ದೇಳುತ್ತಿಲ್ಲ ಕೂಡಲೇ ಮನೆಗೆ ಬನ್ನಿ ಎಂದು ತಿಳಿಸಿದ್ದಾಳೆ. ಪುಷ್ಪಾ ಅವರು 11.30ಕ್ಕೆ ಬಂದು ನೋಡಿದಾಗ ಮನೆಯ ಬಾತ್ ರೂಂ ಮತ್ತು ಮನೆಯ ಮಧ್ಯೆ ಇರುವ ಪ್ಯಾಸೇಜ್ನಲ್ಲಿ ಚೇತನ್ ಮಲಗಿದ್ದ ಸ್ಥಿತಿಯಲ್ಲಿರುವುದು ಕಂಡು ಬಂದಿದೆ.
ತಾಯಿ ಚೇತನ್ನನ್ನು ಎಬ್ಬಿಸಲು ಪ್ರಯತ್ನಿಸಿದರೂ ಏಳದೇ ಇದ್ದಾಗ, ಅವರು ಮನೆಯ ಛಾವಣಿ ಕಡೆ ನೋಡಿದಾಗ ಲುಂಗಿಯೊಂದು ನೇಣು ಹಾಕಿದ ರೀತಿಯಲ್ಲಿ ನೋಡಿ, ಯುವತಿಯಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ, ಚೇತನ್ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿಯೊಬ್ಬಳಿಗೆ ಲೈಕ್ ಮಾಡಿರುವುದನ್ನು ಪ್ರಶ್ನಿಸಲು ತಾನು ಮನೆಗೆ ಬಂದಿರುವುದಾಗಿ, ಈ ವಿಚಾರದ ಬಗ್ಗೆ ಅವರಿಬ್ಬರಿಗೆ ಗಲಾಟೆಯಾಗಿತ್ತು. ಇದರಿಂದ ಬೇಸರಗೊಂಡ ಚೇತನ್ ಮನೆಯೊಳಗೆ ಓಡಿ ಹೋಗಿ ಛಾವಣಿಯ ಅಡ್ಡಕ್ಕೆ ಲುಂಗಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿಯೇ ಅತನನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ಆರೈಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.