
ರಾಷ್ಟ್ರೀಯ ಹೆದ್ದಾರಿ-169: ಸಾಣೂರು ಬಿಕರ್ನಕಟ್ಟೆ ಚತುಷ್ಪಥ ಕಾಮಗಾರಿಗೆ ಅರಣ್ಯ ಇಲಾಖೆ ಅಡ್ಡಿ
ಕಾರ್ಕಳ: ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಸಾಣೂರು ಪುಲ್ಕೇರಿ ಬೈಪಾಸ್ನಿಂದ ಪ್ರಾರಂಭವಾಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಡಿ ಪ್ರದೇಶ ಮುರತಂಗಡಿಯನ್ನು ದಾಟಿ ಬೆಳವಾಯಿ ಸಂಪರ್ಕದ ಮಧ್ಯೆ ಇರುವ ಚಿಲಿಂಬಿಗುಡ್ಡ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆಯಿಂದ ಹೆದ್ದಾರಿ ಕಾಮಗಾರಿ ನಡೆಸಲು ಅನುಮತಿ ಪತ್ರ ದೊರೆಯದ ಕಾರಣ, ಸುಮಾರು ಒಂದೂವರೆ ಕಿಲೋಮೀಟರ್ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಯುಂಟಾಗಿದೆ.
ಕಳೆದ ಎರಡು ವರ್ಷಗಳಿಂದ ಹೆದ್ದಾರಿ ಇಲಾಖೆಯವರು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿಲ್ಲ.
ಹೆದ್ದಾರಿ ಇಲಾಖೆ ಇಂಜಿನಿಯರ್ ಬಳಿ ಈ ಬಗ್ಗೆ ಪ್ರಶ್ನಿಸಿದಾಗ ಕೆಲವು ಮಾಹಿತಿಗಳನ್ನು ಕೇಳಿ ಬೆಂಗಳೂರಿನಿಂದ ಫೈಲ್ ಕುಂದಾಪುರ ಅರಣ್ಯ ಇಲಾಖೆಗೆ ಬಂದಿದೆ ಎಂದು ತಿಳಿಸಿರುತ್ತಾರೆ.
ಸುತ್ತಲೂ ಬೆಟ್ಟಗುಡ್ಡ, ಕಾಡು, ಸಣ್ಣ ನೀರಿನ ತೊರೆಗಳನ್ನು ಒಳಗೊಂಡಿರುವ ಸಾಣೂರು ಚಿಲಿಂಬಿ ಪ್ರದೇಶವು ಸಾಣೂರು-ಮುರತ್ತಂಗಡಿ, ಕಾಂತಾವರ ಪ್ರದೇಶದಲ್ಲಿ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿಗೆ ಸೇರಿದ್ದು, ಬೆಳುವಾಯಿ ಪರಿಸರವು ಮಂಗಳೂರು ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರು ಮಂಗಳೂರು ಹಾಗೂ ಉಡುಪಿ ಸಂಸದರು, ಕಾರ್ಕಳ ಮತ್ತು ಮೂಡಬಿದ್ರೆ ಶಾಸಕರು ಅರಣ್ಯ ಇಲಾಖೆಯ ಅನುಮತಿಗಾಗಿ ಈಗಾಗಲೇ ಎರಡು ವರ್ಷ ಕಳೆದಿದ್ದು, ಇನ್ನಾದರೂ ಕೂಡಲೇ ಅನುಮತಿ ಸಿಗುವ ನೆಲೆಯಲ್ಲಿ ಒಟ್ಟಾಗಿ ಪ್ರಯತ್ನ ಮಾಡಿದರೆ ಸಾಣೂರಿನಿಂದ ಮೂಡಬಿದ್ರೆ ಅಲಂಗಾರುವರೆಗೆ ಸುಮಾರು 12 ಕಿಲೋಮೀಟರ್ ಹೆದ್ದಾರಿ ಚತುಷ್ಪಥ ಎಲ್ಲಾರೀತಿಯಿಂದಲೂ ಸುಸಜ್ಜಿತವಾಗಿ, ಪ್ರಯಾಣಿಕರ ಮತ್ತು ವಾಹನಗಳ ಉಪಯೋಗಕ್ಕೆ ಸಿಗುತ್ತದೆ.
ಈಗಾಗಲೇ ಅರೆಬರೆ ಕಾಮಗಾರಿ, ರಸ್ತೆ ಡೈವರ್ಷನ್ಗಳಿಂದ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಪ್ರಯಾಣಿಕರ ಜೀವಕ್ಕೂ ಸಂಚಕಾರ ತರುತ್ತಿದೆ. ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಹಾಗೂ ಸಂಸದರು ಅಭಿವೃದ್ಧಿಪರ ಇಚ್ಛಾಶಕ್ತಿಯನ್ನು ತೋರ್ಪಡಿಸಿ, ಅರಣ್ಯ ಇಲಾಖೆಯಿಂದ ಸಾಣೂರು ಚಿಲಿಂಬಿ ಪ್ರದೇಶದ ಹೆದ್ದಾರಿ ಕಾಮಗಾರಿಗೆ ಮುಕ್ತಿಯನ್ನು ದೊರಕಿಸಿದರೆ, ಸಾಣೂರು ಪುಲ್ಕೇರಿ ಬೈಪಾಸ್ನಿಂದ ಮೂಡಬಿದ್ರೆ ಅಲಂಗಾರು ವರೆಗೆ ಸುಮಾರು 12 ಕಿಲೋಮೀಟರ್ ಬಹುತೇಕ ಹೆದ್ದಾರಿ ಚತುಷ್ಪಥ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಪ್ರಯಾಣಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.