
ಪ್ರಿಯಾಂಕಾ ಖರ್ಗೆ, ಈಶ್ವರಪ್ಪರಂತೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು: ಡಾ.ಭರತ್ ಶೆಟ್ಟಿ ವೈ. ಆಗ್ರಹ
ಮಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಯ ಪ್ರಕರಣದಲ್ಲಿ ಸರಕಾರದ ಇಡೀ ಆಡಳಿತ ಯಂತ್ರವೇ ನಿರ್ಲಕ್ಷ್ಯ ತೋರಿದ್ದರಿಂದ ಈ ಘಟನೆ ನಡೆದಿದೆ. ವಿಪಕ್ಷ ನಾಯಕರು, ನಮ್ಮ ಕಾರ್ಯಕರ್ತರ ಮೇಲೆ ಸುಲಭವಾಗಿ ಎಫ್ಐಆರ್ ಆಗುತ್ತಿದೆ. ಆದರೆ, ವಿಪಕ್ಷದವರು ಆಡಳಿತ ಪಕ್ಷದವರ ಮೇಲೆ ದೂರು ನೀಡಿದರೆ, ಎಫ್ಐಆರ್ ಆಗುತ್ತಿಲ್ಲ. ಯಾಕೆ ಎಂದು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಭರತ್ ಶೆಟ್ಟಿ ವೈ ಪ್ರಶ್ನಿಸಿದರು.
ಕಾವೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿ.ಟಿ. ರವಿಯವರು ಕೊಟ್ಟ ದೂರಿನ ಎಫ್ಐಆರ್ ಮಾಡಿಲ್ಲ. ಎಫ್ಐಆರ್ ಮಾಡದೆ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿ, ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸಚಿನ್ ಘಟನೆಯಲ್ಲೂ ನ್ಯಾಯಾಂಗ ಆದೇಶ ನೀಡಿದ ಮೇಲೆ ಪೊಲೀಸರು ಕೇಸು ದಾಖಲಿಸಿದರು. ಈ ಸರಕಾರ ಕಾನೂನನ್ನು ಗೌರವಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಸರಕಾರ ಶೇ.100 ಪರ್ಸೆಂಟ್ ಕಮಿಷನ್ ಸರಕಾರವಾಗಿದೆ. ಗುತ್ತಿಗೆದಾರ ಸಚಿನ್ ಅವರಿಗೂ ಕಿರಿಕುಳ ನೀಡಿದ್ದರಿಂದ ಸಾವು ಸಂಭವಿವಿಸಿದೆ. ಈ ಸಾವಿನ ಕುರಿತು ನ್ಯಾಯಾಂಗ ತನಿಖೆ ಆಗಬೇಕು. ನಿಷ್ಪಕ್ಷ ಪಾತ ತನಿಖೆಗೆ ಪ್ರಿಯಾಂಕ ಖರ್ಗೆಯವರು ಮೊದಲು ರಾಜೀನಾಮೆ ಕೊಡಬೇಕು. ಕೆ.ಎಸ್. ಈಶ್ವರಪ್ಪ ಅವರು ಆರೋಪ ಬಂದಾಗ ರಾಜೀನಾಮೆ ನೀಡಿದ್ದನ್ನು ನೋಡಿ ನೈತಿಕತೆ ಕಲಿತುಕೊಳ್ಳಿ. ಖರ್ಗೆ ರಾಜೀನಾಮೆ ನೀಡುವವರೆಗೆ ಹಾಗೂ ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ಬಿಜೆಪಿ ರಾಜ್ಯದಾದ್ಯಂತ ಹೋರಾಟ ನಡೆಸಲಿದೆ ಎಂದು ಡಾ.ಭರತ್ ಶೆಟ್ಟಿ ವೈ ಹೇಳಿದರು.