
ಸಿದ್ಧರಾಮಯ್ಯ ಅವಧಿಯಲ್ಲಿ ನಕ್ಸಲರಿಗೆ ಸುಗ್ಗಿ: ವಿ. ಸುನಿಲ್ ಕುಮಾರ್
Wednesday, January 8, 2025
ಉಡುಪಿ: ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಕಾರ್ಕಳ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ ಅವರು, ಸರ್ಕಾರ ಯಾವ ಮಾನದಂಡದ ಮೇಲೆ ಈ ಕ್ರಮಕ್ಕೆ ಮುಂದಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ನಕ್ಸಲರು, ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ, ಪ್ರಕರಣ ರದ್ದು, ಸುಖ ಸೌಕರ್ಯ ಎಲ್ಲವೂ ಲಭಿಸುತ್ತದೆ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಕರ್ಮಭೂಮಿಯಾಗಿದ್ದ ತಣ್ಣಗಿನ ಮಲೆನಾಡು ಭಾಗದಲ್ಲಿ ಬಂದೂಕಿನ ಮೊರೆತ ಕೇಳಿಸಿದ ನಕ್ಸಲರಿಗೆ ಕ್ಷಮೆ ಕೊಟ್ಟು ಅವರನ್ನು ನಗರ ನಕ್ಸಲರಾಗಿಸಿ ಬುಡಮೇಲು ಕೃತ್ಯಕ್ಕೆ ಲೈಸೆನ್ಸ್ ಕೊಡಲಾಗುತ್ತಿದೆಯೇ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿರುವ ಸುನಿಲ್, ಅದರಿಂದ ಪೊಲೀಸರ ಆತ್ಮಸ್ಥೈರ್ಯ ಏನಾಗಬೇಡ? ಈ ಶರಣಾಗತಿ ಪ್ರಹಸನವೇ ಅನುಮಾನಾಸ್ಪದವಾಗಿದೆ ಎಂದು ತಿಳಿಸಿದ್ದಾರೆ.