
ನಿರ್ಲಕ್ಷ್ಯದ ಚಾಲನೆಯಿಂದ ಮರಳಿ ಬಾರದ ಲೋಕಕ್ಕೆ ಪಯಣ: ಸಂತೋಷ್ ಶೆಟ್ಟಿ
ಕುಂದಾಪುರ: ಒಂದು ಸಣ್ಣ ನಿರ್ಲಕ್ಷ್ಯದಿಂದಾಗಿ ಜರಗಿ ಹೋಗುವ ಭಯಾನಕತೆಗೆ ತೆರ ಬೇಕಾದ ದಂಡ ಮಾತ್ರ ಅಪಾರ. ಹೆತ್ತವರಿಗೆ ಮಗನಿಲ್ಲ, ಹೆಂಡತಿಗೆ ಗಂಡನಿಲ್ಲ, ತಂಗಿಗೆ ಅಣ್ಣನಿಲ್ಲ, ಮಕ್ಕಳಿಗೆ ಅಪ್ಪನಿಲ್ಲ ಕಟ್ಟ ಕಡೆಗೆ ಒಂದು ಸಂಸಾರವೇ ಕಣ್ಣೀರಿನಲ್ಲಿ ಬದುಕನ್ನು ಸವೆಸಬೇಕಾದ ದುರಂತವಿದು ಎಂದು ಉಡುಪಿ ಪ್ರಾದೇಶಿಕ ರಸ್ತೆ ಸಾರಿಗೆ ಅಧಿಕಾರಿ ಸಂತೋಷ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ವಾಹನ ಚಾಲಕ, ಮಾಲೀಕರಿಗಾಗಿ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಲಾದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚಾರಣೆ-2025 ಸಭೆಯಲ್ಲಿ ಮಾತನಾಡಿದರು.
ಇಂದು ಮಾನವನ ನಿರ್ಲಕ್ಷ ದಿಂದಾಗಿಯೇ ಭಾರತದಲ್ಲಿ ವರ್ಷವೊಂದಕ್ಕೆ ಸರಿಸುಮಾರು 1.5 ಲಕ್ಷದಿಂದ 2 ಲಕ್ಷದ ತನಕ ರಸ್ತೆ ಅಪಘಾತಗಳು ಜರಗುತ್ತದೆ. ಅದರಲ್ಲಿ ಪ್ರಾಣ ಚೆಲ್ಲುವರ ಸಂಖ್ಯೆ ಅನಾಥವಾಗುವ ಕುಟುಂಬಗಳನ್ನು ಗಮನಿಸಿದರೆ ರಸ್ತೆ ಆಪಘಾತಗಳ ತಿವ್ರತೆ ಅರ್ಥವಾಗುತ್ತದೆ. ಕರಾರುವಾಕ್ಕಾಗಿ ಚಾಲನಾ ನಿಯಮಗಳನ್ನು ಪ್ರತಿಯೋರ್ವರೂ ಕಡ್ಡಾಯವಾಗಿ ಪಾಲಿಸಿದರೆ ರಸ್ತೆ ದುರಂತಗಳಿಂದ ಪಾರಾಗಬಹುದು ಎಂದರು.
ಅತ್ಯಂತ ಸರಳವಾಗಿ ಅಷ್ಟೇ ಮನಕಲಕುವಂತೆ ಅಪಘಾತಗಳ ಭೀಕರತೆಯನ್ನು ಬಿಚ್ಚಿಟ್ಟ ಅವರು, ಪ್ರತಿಯೊರ್ವರೂ ಸ್ವಯಂ ಪ್ರೇರಿತರಾಗಿ ರಸ್ತೆ ನಿಯಮಗಳನ್ನು ಪಾಲಿಸಿ ಅವಘಡ, ದುರಂತಗಳಿಂದ ಪಾರಾಗುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಹೊಸಂಗಡಿ ಕರ್ನಾಟಕ ಪವರ್ ಕಾಪೋರೇಷನ್ ಘಟಕದ ಅಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.