.jpeg)
ಗೃಹಲಕ್ಷ್ಮೀ ಯೋಜನೆಯ ಹಣ ಕೂಡಲೇ ಬಿಡುಗಡೆಗೊಳಿಸಲು ಸತೀಶ್ ಕುಂಪಲ ಆಗ್ರಹ
Tuesday, February 18, 2025
ಮಂಗಳೂರು: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಯೂ ಟರ್ನ್ ಹೊಡೆಯುವ ಲಕ್ಷಣ ತೋರಿಸುತ್ತಿದೆ. ನನಗೂ ಫ್ರೀ, ನಿನಗೂ ಫ್ರೀ, ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳು 2000 ರೂ. ಹಣ ಜಮಾವಣೆ, ಅನ್ನಭಾಗ್ಯ, ಯುವನಿಧಿ ಎಂದು ಚುನಾವಣಾ ಪ್ರಚಾರದಲ್ಲಿ ಘಂಟಾಘೋಷವಾಗಿ ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಈಗ ಯೋಜನೆ ಜಾರಿಗೆ ಹಣದ ಕೊರತೆ ಇದೆ ಎಂದು ಜಾರಿಗೊಳ್ಳುತ್ತಿದ್ದಾರೆ.
ಅನ್ನಭಾಗ್ಯದ ನಗದು ಫಲಾನುಭವಿಗಳಿಗೆ ನೀಡದೆ ಐದು ತಿಂಗಳಾಗಿದೆ. ಗೃಹಲಕ್ಷ್ಮೀ ಯೋಜನೆಯ ಮಾಸಿಕ ಭತ್ಯೆ ಫಲಾನುಭವಿಗಳ ಖಾತೆಗೆ ಪಾವತಿಸದೆ ಮೂರು ತಿಂಗಳಾಗಿದೆ. ಸರ್ಕಾರ ಕೂಡಲೇ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಹಣವನ್ನು ಪಾವತಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಬಸ್ ದರ, ಮೆಟ್ರೋ ರೈಲು ದರ, ವಿದ್ಯುತ್ ದರ ಏರಿಕೆ ಮಾಡಿ ಜನಸಾಮಾನ್ಯರ ಜೀವನಕ್ಕೆ ಬರೆ ಎಳೆಯುತ್ತಿರುವ ಸರ್ಕಾರ, 5 ರೂ. ಇದ್ದ ಜನನ, ಮರಣ ಧೃಡ ಪತ್ರದ ದರವನ್ನು ಏಕಾಏಕಿ 50 ರೂ.ಗೆ ಏರಿಸುವುದರ ಮೂಲಕ ಇದೊಂದು ಜನವಿರೋಧಿ, ಜನರ ಜೇಬು ಲೂಟಿ ಮಾಡಲು ಹೊರಟಿರುವ ಸರ್ಕಾರ ಎಂದು ಸಾಬೀತಾಗಿದೆ ಎಂದು ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.