
‘ಲಿಂಗ ಪೂರ್ವಾಗ್ರಹದ ಬೇರುಗಳು ಇನ್ನಷ್ಟು ದಟ್ಟವಾಗಿವೆ’: ಪ್ರೊ. ಸಬಿಹಾ ಭೂಮಿಗೌಡ
ಮಂಗಳೂರು: ಇಂದಿನ ಕಾಲಘಟ್ಟದಲ್ಲಿ ಹೆಣ್ಮಕ್ಕಳಿಗೆ ಉದ್ಯೋಗ ಮತ್ತು ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮ ಸ್ವಂತಿಕೆಯನ್ನು, ಅಸ್ಮಿತೆಯನ್ನು ರೂಪಿಸುವುದಕ್ಕೆ ಅವಕಾಶಗಳು ಸಿಗುತ್ತಿವೆಯಾದರೂ ಇದು ಮೇಲುಸ್ತರದಲ್ಲಿ ಕಾಣುವ ಸಮಾನತೆಯ ನೋಟವಾಗಿದೆ. ಅದರ ಆಳಕ್ಕೆ ಹೋದ ಹಾಗೆ ಒಳಗೆ ಲಿಂಗ ಪೂರ್ವಾಗ್ರಹದ ಬೇರುಗಳು ಇನ್ನಷ್ಟು ದಟ್ಟವಾಗಿವೆ.ಆದರೆ ಅದು ಹಿಂದಿನ ಚಹರೆಯಲ್ಲಿಲ್ಲ. ಬೇರೆ ಬೇರೆ ವೇಷದಲ್ಲಿ ನಮ್ಮೊಳಗೆ ಉಸಿರಾಡುತ್ತಾ ಇವೆ. ಇದನ್ನು ಸೂಕ್ಷ್ಮವಾಗಿ ಅವಲೋ ಕಿಸಿ ಬದಲಾವಣೆಯನ್ನು ನಿರ್ಮಿಸುವ ಅಗತ್ಯತೆ ಇದೆ ಎಂದು ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಹೇಳಿದರು.
ಅವರು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ ವತಿಯಿಂದ ’ಲಿಂಗ ಸಮಾನತೆ: ಸುಸ್ಥಿರ ಅಭಿವೃದ್ಧಿಯ ಅಗತ್ಯತೆ’ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಮಹಿಳೆಯ ಅನುಭವ, ಜ್ಞಾನವನ್ನು ಅಕಾಡೆಮಿಕ್ ವಲಯದಲ್ಲಿ ಜ್ಞಾನ ಎಂಬುದಾಗಿ ಗುರುತಿಸದೆ ಇದ್ದ ಪರಿಣಾಮ ನಮ್ಮ ಸಮಾಜ ಹಾಗೂ ದೇಶದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಜ್ಞಾನವನ್ನು ನೋಡುವ ಬಗೆ ಬದಲಾಗಬೇಕಿದೆ. ಅಭಿವೃದ್ಧಿ ಎಂದರೆ ಮೂಲಭೂತ ಸೌಲಭ್ಯಗಳ ವಿಸ್ತರಣೆ ಮಾತ್ರವಲ್ಲ ಅಭಿವೃದ್ಧಿಯ ಸ್ವರೂಪವನ್ನು ಸೂಕ್ಷ್ಮವಾಗಿ ಅವಲೋಕಿಸ ಬೇಕಿದೆ. ಅಭಿವೃದ್ಧಿಯನ್ನು ಬಹುತ್ವದ ನೆಲೆಯಲ್ಲಿ ಕಲ್ಪಿಸಬೇಕಿದೆ ಎಂದರು.
ವಿದ್ಯಾವಂತರು, ನಗರೀಕರಣ, ಮೂಲಭೂತ ಸೌಲಭ್ಯಗಳು ಇರುವ ಜಾಗದಲ್ಲೇ ಲಿಂಗಾನುಪಾತ ಕುಸಿಯುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಇದೆಲ್ಲ ನಮ್ಮ ಅಮಾನವೀಯ ಮುಖಗಳನ್ನು ಬಯಲಿಗೆಳೆಯುವ ಒಂದು ಬಗೆಯಾಗಿದೆ. ವಿಜ್ಞಾನದ ಆವಿಷ್ಕಾರಗಳು, ಸಾಮಾಜಿಕವಾದ ಚಿಂತನೆಗಳು, ಸಂಗತಿಗಳು ಮತ್ತು ಬದುಕಿನಲ್ಲಿ ಅವು ಗಳನ್ನು ಅಳವಡಿಸಿಕೊಳ್ಳುವ ಕ್ರಮಗಳು ಇವುಗಳ ನಡುವೆ ನಾವು ವಿವೇಚನಾ ರಹಿತವಾಗಿ ಇರುವುದರ ಪರಿಣಾಮ ಎಡವುತ್ತಿದ್ದೇಯೋ ಎಂಬುದನ್ನು ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಸಮ ಸಮಾಜದ ನಿರ್ಮಾಣವಾಗಬೇಕಾದರೆ ಅನ್ಯಾಯಗಳಾದಾಗ ಪ್ರಶ್ನಿಸುವ ಮನೋಭಾವ ಹೆಚ್ಚಾಗಬೇಕು. ಅಭಿವೃದ್ಧಿಯ ದೃಷ್ಟಿಕೋನ ಗಳು ಬದಲಾಗಬೇಕು. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನಗಳು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಸಹಸಂಯೋಜಕಿ ಡಾ. ವಜೀದಾ ಬಾನು ಅವರು ಕಾರ್ಯಕ್ರಮದ ಕುರಿತು ವಿವರಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಬಿ.ಕೆ. ಸರೋಜಿನಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ. ಯಶಸ್ವಿನಿ ಬಟ್ಟಂಗಾಯ ವಂದಿಸಿದರು. ಪ್ರಧ್ಯಾಪಕರಾದ ಡಾ. ಶಶಿರೇಖಾ, ಡಾ. ಪ್ರಿಯಾ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ. ಪ್ರೀತಿ ಕೀರ್ತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
’ಲಿಂಗತ್ವದ ಸಮಸ್ಯೆಗಳ ಬಗೆಗೆ ಅರಿವು ಮೂಡಿಸುವಲ್ಲಿ ಮಾಧ್ಯಮದ ಪಾತ್ರ’ ಎಂಬ ವಿಷಯದ ಬಗೆಗೆ ಡಾ. ಪದ್ಮರಾಣಿ; ’ಪಠ್ಯಕ್ರಮ ಮತ್ತು ಶಿಕ್ಷಣಕ್ಷೇತ್ರದಲ್ಲಿ ಲಿಂಗತ್ವ ಪರಿಕಲ್ಪನೆಯ ಒಳಗೊಳ್ಳುವಿಕೆ’ ಎಂಬ ವಿಷಯದ ಬಗೆಗೆ ಡಾ. ಪುಷ್ಪ; ’ಲಿಂಗತ್ವದ ಬಗೆಗಿನ ದೌರ್ಜನ್ಯ ಮತ್ತು ತಾರತಮ್ಯದ ಸವಾಲುಗಳನ್ನು ಎದುರಿಸಲು ಕಾನೂನಿನ ಚೌಕಟ್ಟು’ ಎಂಬ ವಿಷಯದ ಕುರಿತಾಗಿ ರಾಜು ಮೊಗವೀರ ಕೆ ಎ ಎಸ್ ಮಾತನಾಡಿದರು. ದೇವದಾಸಿ ಪದ್ಧತಿಯ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಭ್ರೂಣ ಹತ್ಯೆಯ ಬಗ್ಗೆ ಕಳೆದ ಹಲವು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಈಗಲೂ ಹಲೆವೆಡೆ ಭ್ರೂಣ ಪತ್ತೆ ಕೇಂದ್ರಗಳು ಪತ್ತೆಯಾಗುತ್ತಲ್ಲೇ ಇವೆ. ಕರ್ನಾಟಕದಲ್ಲಿ ಲಿಂಗಾನುಪಾತಲ್ಲಿ ಆರು ವರ್ಷದೊಳಗಿನ ಹೆಣ್ಣು ಶಿಶುವಿನ ಸಂಖ್ಯೆ 1000ಕ್ಕೆ 978 ಇದ್ದದ್ದು ಈಗ 948 ಕ್ಕೆ ಕುಸಿದಿರುವುದು ಆತಂಕಕಾರಿಯಾಗಿದೆ. ಇಂತಹ ಇಳಿಕೆಗಳ ಹಿಂದಿನ ಆಲೋಚನೆಗಳು ಯಾವುದು ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ.