
ಫೆ.10 ರಂದು ಬಡಗಬಸ್ತಿ ರಥೋತ್ಸವ
ಮೂಡುಬಿದಿರೆ: ಇಲ್ಲಿನ ಬಡಗ ಬಸ್ತಿ ಭ. ಶ್ರೀ ಚಂದ್ರಪ್ರಭ ಸ್ವಾಮಿ ವಾರ್ಷಿಕ ರಥೋತ್ಸವ ಫೆ.7ರಿಂದ ಫೆ. 11ರವರೆಗೆ ಜರಗಲಿದೆ ಎಂದು ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರವಿವಾರ ಬೆಳಗ್ಗೆ ಸರ್ವ ಯಕ್ಷಯಂತ್ರಾರಾಧನೆ, ಸೋಮವಾರ ಬೆಳಗ್ಗೆ ಧ್ವಜಪೂಜೆ, ಬಲಿಪೂಜೆ, ಮಧ್ಯಾಹ್ನ ಭ. ಚಂದ್ರನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಠದಲ್ಲಿ ಸಂಘ ಸಂತರ್ಪಣೆ, ರಾತ್ರಿ ರಥೋತ್ಸವ, ಶ್ರೀ ವಿಹಾರ, ಉತ್ಸವ, 108 ಕಲಶಗಳಿಂದ ಮಹಾಭಿಷೇಕ ಜರಗಲಿದೆ. ಬೆಂಗಳೂರಿನ ಭಾಗ್ಯವತಿ ಪ್ರಕಾಶ್ ಕುಮಾರ್ ಅವರು ಅರಥ ಮತ್ತು ಬಸದಿ ಪುಷ್ಪಾಲಂಕಾರ, ದೀಪಾಲಂಕಾರ, ಉದ್ಯಮಿ ಮಹೇಂದ್ರವರ್ಮ ಶ್ರೀ ಜ್ವಾಲಾಮಾಲಿನೀ ಅಮ್ಮನವರಿಗೆ ವಿಶೇಷ ಅಲಂಕಾರ ಸೇವೆ ನಡೆಸಿಕೊಡಲಿದ್ದಾರೆ. ಮಂಗಳವಾರ ಕುಂಕುಮೋತ್ಸವವಾಗಿ ಧ್ವಜಾವರೋಹಣ, ಪಂಚಾಮೃತ ಅಭಿಷೇಕ, ಸರ್ವಾಷ್ಣ ಯಕ್ಷನಿಗೆ ಪಂಚಾಮೃತ ಅಭಿಷೇಕ ನಡೆಯಲಿದೆ.
ಸೋಮವಾರ ರಾತ್ರಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಮಾಜಿ ಸಚಿವ ಕೆ. ಅಭಯಚಂದ್ರ, ಕೆ.ಪಿ. ಜಗದೀಶ ಭಾಗವಹಿಸಲಿದ್ದು ನ್ಯಾಯವಾದಿ ಶ್ವೇತಾ ಜೈನ್ ಸಾಂಸ್ಕೃತಿಕ ಕಲಾಪ ಉದ್ಘಾಟಿಸಲಿದ್ದಾರೆ. ಜೈನಮಠದ ದೇವಿ ನೃತ್ಯ ಕಲಾ ಬಳಗ ಮತ್ತು ಮಕ್ಕಿಮನೆ ಕಲಾವಿದರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.